ಚಿತ್ತಾಪುರ: ತಾಲೂಕಿನಲ್ಲಿ ಅತಿವೃಷ್ಟಿ ಮತ್ತು ಪ್ರವಾಹದಿಂದ ಬೆಳೆ ಹಾನಿಗೊಳಗಾದ ರೈತರಿಗೆ ರಾಜ್ಯ ಸರ್ಕಾರದಿಂದ 20.58 ಕೋಟಿ ರೂ ಪರಿಹಾರ ಬಿಡುಗಡೆ ಮಾಡಲಾಗಿದೆ ಎಂದು ಪಂಚ ಗ್ಯಾರಂಟಿ ಜಿಲ್ಲಾ ಸಮಿತಿ ಸದಸ್ಯ ಶರಣು ಡೋಣಗಾಂವ ಹೇಳಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಮುಂದಾಳತ್ವದಲ್ಲಿ ಪರಿಹಾರ ಬಿಡುಗಡೆ ಪ್ರಕ್ರಿಯೆ ನಡೆದಿದೆ. ಮಳೆ ಹಾನಿಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಸ್ತುವಾರಿ ಸಚಿವ
ಪ್ರಿಯಾಂಕ್ ಖರ್ಗೆ ಅವರು ಹಾನಿಗೊಳಗಾದ ಪ್ರದೇಶಗಳ ಸಮೀಕ್ಷೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ರೈತರ ಹಿತದೃಷ್ಟಿಯಿಂದ ತ್ವರಿತವಾಗಿ ಕ್ರಮ ಕೈಗೊಳ್ಳಲಾಗಿದೆ ಎಂದರು.
ಜಿಲ್ಲೆಯಲ್ಲಿ ಒಟ್ಟು 3.07 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಉಂಟಾಗಿದೆ, ರಾಜ್ಯ ಸರ್ಕಾರವು ಒಟ್ಟು 518 ಕೋಟಿ ಪರಿಹಾರ ಎರಡು ಕಂತುಗಳಲ್ಲಿ ಬಿಡುಗಡೆ ಮಾಡಿದೆ. ಮೊದಲ ಕಂತಿನಲ್ಲಿ 268 ಕೋಟಿ ರೂ ಹಾಗೂ 2ನೇ ಕಂತಿನಲ್ಲಿ ಸುಮಾರು 250 ಕೋಟಿ ರೂ ಮಂಜೂರಾತಿ ಮಾಡಿದೆ. ತಾಲೂಕಿನಲ್ಲಿ 23.225 ಹೆಕ್ಟೇರ್ ಬೆಳೆ ಹಾನಿ ದಾಖಲಾಗಿದ್ದು, ಒಂದು ಹೆಕ್ಟೇರ್ ಬೆಳೆ ಹಾನಿಯಾದ ಪ್ರತಿ ರೈತರ ಖಾತೆಗೆ 8,500 ರೂ ಪರಿಹಾರ ನೇರವಾಗಿ ಖಾತೆಗೆ ಜಮಾ ಆಗಲಿದೆ. ಹತ್ತು ದಿನಗಳಲ್ಲಿ ರೈತರ ಖಾತೆಗೆ ಪರಿಹಾರ ಹಣ ಜಮಾವಾಗಲು ಪ್ರಾರಂಭವಾಗಲಿದೆ ಎಂದರು.
ಅತಿವೃಷ್ಟಿಯಿಂದ ಬೆಳೆ ಹಾನಿಗೊಳಗಾದ ರೈತರ ಕಷ್ಟವನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರ ಪರಿಹಾರ ಬಿಡುಗಡೆ ಮಾಡಿರುವುದು ರೈತರ ಬದುಕಿಗೆ ಸ್ಪಂದನೆಯಾಗಿದೆ ಎಂದರು.