ಬೆಂಗಳೂರು: ಸ್ವತಂತ್ರ ಭಾರತದ ಅತ್ಯಂತ ದುರ್ಬಲ, ಅಸಮರ್ಥ ಗೃಹ ಸಚಿವರು ಯಾರಾದರೂ ಇದ್ದರೆ ಅದು ಅಮಿತ್ ಶಾ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ವತಂತ್ರ ಭಾರತದಲ್ಲಿ ಅತ್ಯಂತ ದುರ್ಬಲ, ಅಸಮರ್ಥ ಗೃಹ ಸಚಿವರು ಯಾರಾದರೂ ಇದ್ದರೆ ಅದು ಅಮಿತ್ ಶಾ. ಪುಲ್ವಾಮಾ ಆಯ್ತು, ಮಣಿಪುರ ಆಯ್ತು, ಪಹಲ್ಗಾಮ್, ಇದೀಗ ದೆಹಲಿ ಹೀಗೆ ಸಾಕಷ್ಟು ಆಗಿದೆ. ಚುನಾವಣಾ ಭಾಷಣದಲ್ಲಿ ಬಾಂಗ್ಲಾದೇಶದವರು ಒಳಗೆ ಬರ್ತಾರೆ ಅಂತಾರೆ, ಆದರೆ ಈಗ ಆಡಳಿತ ನಡೆಸುತ್ತಿರುವವರು ಯಾರು ? ಇದಕ್ಕೆಲ್ಲ ಯಾರು ಹೊಣೆಗಾರಿಕೆ ? ಪ್ರಧಾನಿ ಮೋದಿಯವರು ಯಾಕೆ ಅಮಿತ್ ಶಾ ಅವರಿಗೆ ಹೆದರುತ್ತಿದ್ದಾರೆ. ನಮ್ಮ ಗುಟ್ಟು ಹೊರಗೆ ಬರುತ್ತೆ ಅಂತಾನಾ ? ಛಪ್ಪನ್ ಇಂಚ್ ಎಲ್ಲಿ ಹೋಯ್ತು ? ಬೇರೆ ದೇಶದಲ್ಲಿ ಆಗಿದ್ದರೆ ಇಷ್ಟೊತ್ತಿಗೆ ಗೃಹ ಸಚಿವರು ರಾಜೀನಾಮೆ ಕೊಡುತ್ತಿದ್ದರು. ನಿಮ್ಮ ಆರ್ಎಸ್ಎಸ್ನವರನ್ನು ಗಡಿಗೆ ಕಳುಹಿಸಿ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇನ್ನೂ ಎಷ್ಟು ಜನ ಪ್ರಾಣ ಕಳೆದುಕೊಳ್ಳಬೇಕು ? ಇದರ ಹೊಣೆಗಾರಿಕೆ ಯಾರು ? ನಾವು ವಿರೋಧ ಪಕ್ಷನಾ ? ಮಾತೆತ್ತಿದ್ದರೆ ಅಭಿನವ ಸರ್ದಾರ್ ಪಟೇಲ್ ಎನ್ನುತ್ತಾರೆ, 56 ಇಂಚಿನ ಎದೆ ಎನ್ನುತ್ತಾರೆ. ಕಳೆದ 10 ವರ್ಷದ್ದನ್ನು ಲೆಕ್ಕ ತೆಗೆದುಕೊಳ್ಳಬೇಕು, ಇವರು ಮೊದಲು ರಾಜೀನಾಮೆ ಕೊಡಲಿ ಆಮೇಲೆ ಮಾತಾಡೋಣ ಇವರಿಗೆ ಏನೂ ಪ್ರಶ್ನೆ ಮಾಡೋಹಾಗಿಲ್ವಾ ? ಕಾಂಗ್ರೆಸ್ ಸರ್ಕಾರಕ್ಕೆ ಮಾತ್ರ ಅಕೌಂಟೆಬಿಲಿಡಿ ಇರೋದಾ ? ಕೇಂದ್ರ ಸರ್ಕಾರಕ್ಕೆ ಇಲ್ಲವಾ ? ಎಂದು ಅಸಮಾಧಾನ ಹೊರಹಾಕಿದ್ದಾರೆ.
ಈಗ ಅಭಿನವ ಸರ್ದಾರ ಪಟೇಲ್ ಎಲ್ಲಿ ಮಾಯವಾದ್ರು ? ಈಗ ಆರ್ಎಸ್ಎಸ್ನವರು ಎಲ್ಲೋದ್ರು ? ಈ ಸಂದರ್ಭದಲ್ಲಿ ಏನು ಹೇಳ್ತಾರೆ ? ದೊಡ್ಡ ದೊಡ್ಡ ಮಾತಾಡ್ತಾರಲ್ಲ ಇದೆಲ್ಲ ಸೋಷಿಯಲ್ ಮೀಡಿಯಾಗೆ ಮಾತ್ರ ಸೀಮಿತ ಎಂದು ಹೇಳಿದ್ದಾರೆ.