ಕಲಬುರಗಿ: ನಾಗರಿಕರ ಆರೋಗ್ಯದ ಬಗ್ಗೆ ಕಾಳಜಿ ಮತ್ತು ಸುರಕ್ಷತೆ ಜೊತೆಗೆ ಔಷಧಗಳ ಬಗ್ಗೆ ಸಲಹೆ-ಸೂಚನೆ ನೀಡುವ ಔಷಧ ತಜ್ಞರು ಆರೋಗ್ಯ ರಕ್ಷಕರಾಗಿ ಕಾರ್ಯನಿರ್ವಹಿಸುತ್ತಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಫಾರ್ಮಸಿಸ್ಟ್ ಕೊಡುಗೆ ಅನನ್ಯವಾಗಿದೆ ಎಂದು ಫಾರ್ಮಸಿಸ್ಟ್ ಶಿವರಾಜ ಲೋಹಾರ್ ಹೇಳಿದರು.
ನಗರದ ಆಳಂದ ರಸ್ತೆಯ ಸಂತೋಷ ಕಾಲೋನಿ ಕ್ರಾಸ್ ಸಮೀಪದ ಬಸವಗಂಗಾ ಮೆಡಿಕಲ್ಸ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ವಿಶ್ವ ಫಾರ್ಮಸಿಸ್ಟ್ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದ ಅವರು, ಕರೋನಾದ ಸಂದಿಗ್ಧ ಪರಿಸ್ಥಿಯಲ್ಲಿ ಕರೋನಾ ರೋಗಿಗಳು ಮತ್ತು ಸಾಮಾನ್ಯ ಕಾಯಿಲೆ ಬಾಧಿತರಿಗೆ ಮಾತೃವಾತ್ಸಲ್ಯ ತೋರಿ ಅವರನ್ನು ಹತ್ತಿರದ ಯೋಗಕ್ಷೇಮ ವಿಚಾರಿಸಿ, ಸೂಕ್ತ ಔಷಧಗಳನ್ನು ಹಗಲು-ರಾತ್ರಿಯೆನ್ನದೆ ಸೇವೆ ನೀಡಿದ್ದಾರೆ. ಎಲ್ಲರೂ ಔಷಧಿ ವ್ಯಾಪಾರಿಯಾಗಲು ಸಾಧ್ಯವಿಲ್ಲ. ವೈದ್ಯರ ಚೀಟಿ ಸರಿಯಾಗಿ ಅರ್ಥ ಮಾಡಿಕೊಂಡು ಸೂಕ್ತ ಔಷಧಿ ನೀಡಬೇಕು ಎಂದರು.
ಬಳಗದ ಅದ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ ಪಾಟೀಲ್ ಮಾತನಾಡಿ, ಸೂಕ್ತ ಔಷಧಗಳನ್ನು ಹಗಲು-ರಾತ್ರಿಯೆನ್ನದೆ ಫಾರ್ಮಸಿಸ್ಟ್’ಗಳು ಸೇವೆ ನೀಡಿದ್ದಾರೆ. ವೈದ್ಯರು, ಫಾರ್ಮಸಿಸ್ಟ್’ಗಳು ಹಣಗಳಿಕೆ ಉದ್ದೇಶವೇ ಪ್ರಧಾನವೆಂಬ ಜನರ ಮನೋಭಾವನೆ ಬೇಡ. ನಿರಂತರವಾಗಿ ಬಿಡುವಿಲ್ಲದ ಸೇವೆ ಅವರದಾಗಿದೆ. ಒಂದು ವೇಳೆ ಸೇವೆಯಲ್ಲಿ ವ್ಯತಯ ಉಂಟಾದರೆ ಅನೇಕ ಜನರ ಪ್ರಾಣಕ್ಕೆ ತೊಂದರೆ ಇದೆ ಎಂಬುದನ್ನು ಮರೆಯಬಾರದು ಎಂದು ಮಾರ್ಮಿಕವಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಡಾ.ರಾಜಶೇಖರ ಪಾಟೀಲ್, ಶಿವಯೋಗೆಪ್ಪಾ ಎಸ್.ಬಿರಾದಾರ, ಅಸ್ಲಾಂ ಶೇಖ್, ದತ್ತು ಹಡಪದ, ಸುಭಾಷ್ ರತಕಲ್ ಸೇರಿದಂತೆ ಅನೇಕರು ಇದ್ದರು.