ಮುಂದಿನ 4 ದಿನ ಗುಡುಗು ಸಹಿತ ಭಾರಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯ

ಬೆಂಗಳೂರು: ರಾಜ್ಯದಲ್ಲಿ ಒಣಹವೆಯ ವಾತಾವರಣ ಇದೆ, ತಿಂಗಳಾಂತ್ಯಕ್ಕೆ ತಾತ್ಕಾಲಿಕವಾಗಿ ಕೊನೆಯಾಗಲಿದೆ. ಎಲ್ಲೆಡೆ ಮಬ್ಬು ವಾತಾವರಣ ಸೃಷ್ಟಿಯಾಗಲಿದೆ. ಸಾಧಾರಣದಿಂದ ಭಾರಿ ಮಳೆಯಾಗುವ ಲಕ್ಷಣಗಳು ಇವೆ. ಏಪ್ರಿಲ್ 28 ರಿಂದ ಮೇ 1ರವರೆಗೆ 4 ದಿನಗಳ ಕಾಲ ರಾಜ್ಯಾದ್ಯಂತ ವರುಣ ಆರ್ಭಟಿಸಲಿದ್ದಾನೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರಾವಳಿ ಭಾಗ ಮತ್ತು ಒಳನಾಡು ಜಿಲ್ಲೆಗಳು ಸೇರಿದಂತೆ ರಾಜ್ಯದಲ್ಲಿ ಏಪ್ರಿಲ್ 28ರವರೆಗೆ ಅಧಿಕ ತಾಪಮಾನದ ವಾತವರಣ ಮುಂದುವರೆಯಲಿದೆ. ಕೆಲವೆಡೆ ಲಘು ಮಳೆಯಾಗಬಹುದು. ನಂತರ 4 ದಿನಗಳ ಕಾಲ ಗುಡುಗು ಮಿಂಚು ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ. ಇದಕ್ಕೆ ಬಂಗಾಳಕೊಲ್ಲಿ ಸಮುದ್ರ ಮೇಲ್ಮೈನಲ್ಲಿ ಸೃಷ್ಟಿಯಾಗಿ ಭೂಮಿ ಮೇಲ್ಮೈ ಮೇಲೆ ತೀವ್ರವಾಗಿ ಬೀಸುತ್ತಿರುವ ಚಂಡಮಾರುತ ಪರಿಚಲನೆ ಕಾರಣವಾಗಿದೆ.

ಗುಡುಗು ಸಹಿತ ಭಾರಿ ಮಳೆ
ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮೈಸೂರು, ರಾಮನಗರ, ಶಿವಮೊಗ್ಗ, ವಿಜಯನಗರ, ತುಮಕೂರು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ ಸುರಿಯಲಿದೆ. 4 ದಿನ ಮಬ್ಬು ಕವಿಯುವ ಸಾಧ್ಯತೆ ಇದೆ. ಶುಷ್ಕ ವಾತಾವರಣ ಸಂಪೂರ್ಣ ಬದಲಾಗಲಿದೆ ಎಂದು ಊಹಿಸಲಾಗಿದೆ.

ಈ ಅವಧಿಯಲ್ಲಿ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಾದ ಬಾಗಲಕೋಟೆ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರ ಮಳೆಯಾಗಬಹುದು ಎನ್ನಲಾಗಿದೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಪೂರ್ವ ಮುಂಗಾರು ಮಳೆ ಹೆಚ್ಚಿನ ಪ್ರಮಾಣದಲ್ಲಿ ಸಕ್ರಿಯವಾಗಿರಲಿದೆ. ಹೀಗಾಗಿ ಮಲೆನಾಡು ಭಾಗದಲ್ಲಿ ಮೇ ಮೊದಲ ವಾರ ಹೆಚ್ಚಿನ ವರ್ಷಧಾರೆ ಲಕ್ಷಣವಿದೆ.

ಸದ್ಯ ರಾಜ್ಯದಲ್ಲಿ ಒಣಹವೆ ಸೃಷ್ಟಿಯಾಗಿದೆ, ಉತ್ತರ ಕರ್ನಾಟಕದ ವಿವಿಧೆಡೆ ಅತ್ಯಧಿಕ ತಾಪಮಾನ ದಾಖಲಾಗಿದೆ. ಕಲಬುರಗಿಯಲ್ಲಿ 43 ಡಿಗ್ರಿ ಸೆಲ್ಸಿಯಸ್, ಬೀದರ್ 42 ಡಿಗ್ರಿ ಸೆಲ್ಸಿಯಸ್, ರಾಯಚೂರು 40 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಉಳಿದಂತೆ ವಿಜಯಪುರ 39, ಬಾಗಲಕೋಟೆ ಮತ್ತು ಕೊಪ್ಪಳದಲ್ಲಿ ತಲಾ 38 ಡಿಗ್ರಿ ಸೆಲ್ಸಿಯಸ್, ಕಾರವಾರ, ಬೆಳಗಾವಿ ವಿಮಾನ ನಿಲ್ದಾಣ, ಚಿಂತಾಮಣಿ, ಧಾರವಾಡ, ಬೆಳಗಾವಿ ನಗರದಲ್ಲಿ 36 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಬೆಂಗಳೂರು ಹವಾಮಾನ ವರದಿ
ಬೆಂಗಳೂರಿನಲ್ಲಿ ಮುಂದಿನ 48 ದಿನ ಒಣಹವೆ ಕಂಡು ಬರಲಿದೆ. ಗಾಳಿ ವೇಗದಲ್ಲಿ ಯಾವ ಬದಲಾವಣೆಯಾಗದು. ಒಂದೆರಡು ಕಡೆ ಮಳೆ ವಾತವರಣ ಉಂಟಾಗಬಹುದು. ಗರಿಷ್ಠ ತಾಪಮಾನ 33 ಹಾಗೂ ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ವರದಿ ತಿಳಿಸಿದೆ.

Leave a Reply

Your email address will not be published. Required fields are marked *