ಕಲಬುರಗಿ: ಗುಬ್ಬಚ್ಚಿ ಸೇರಿದಂತೆ ವಿವಿಧ ಪಕ್ಷಿಗಳು ಕೀಟ, ಹುಳ-ಹುಪ್ಪಟಿಗಳನ್ನು ಭಕ್ಷಿಸುವ ಮೂಲಕ ಮಣ್ಣು ಮತ್ತು ಬೆಳೆಗಳನ್ನು ರಕ್ಷಿಸುತ್ತವೆ. ಇದರಿಂದ ಮಣ್ಣು ಸತ್ವಯುತವಾಗಿ, ಪರಾಗಸ್ಪರ್ಷ ಕ್ರಿಯೆ ಜರುಗುವುದರಿಂದ ಉತ್ತಮ ಇಳುವರಿ ಸಾಧ್ಯ. ಜೊತೆಗೆ ಗಿಡ-ಮರಗಳು ಸಮೃದ್ಧವಾಗಿ ಬೆಳೆಯುವ ಮೂಲಕ ಪರಿಸರ, ನಿಸರ್ಗ ಸಮತೋಲವಾಗಿರಲು ಸಾಧ್ಯವಿದೆ ಎಂದು ಉಪನ್ಯಾಸಕ ಹಾಗೂ ಪಕ್ಷಿಪ್ರೇಮಿ ಎಚ್.ಬಿ ಪಾಟೀಲ ಹೇಳಿದರು.
ನಗರದ ಸಂತೋಷ ಕಾಲೋನಿ ಕ್ರಾಸ್ ಸಮೀಪದ ‘ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ ಅಕಾಡೆಮಿ’ಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಗುರುವಾರ ಸಂಜೆ ಜರುಗಿದ ‘ವಿಶ್ವ ಗುಬ್ಬಚ್ಚಿ ದಿನಾಚರಣೆ’ ಪ್ರಯುಕ್ತ ಗುಬ್ಬಚ್ಚಿ, ಪಕ್ಷಿಗಳ ರಕ್ಷಣೆಯ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಿಸಿಲಿನ ತೀವ್ರತೆ ಬಹಳಷ್ಟಾಗಿದ್ದು, ಗುಬ್ಬಚ್ಚಿಗಳು ಸೇರಿದಂತೆ ಅನೇಕ ಪಕ್ಷಿಗಳು ನೀರು, ಆಹಾರದ ಕೊರತೆಯಿಂದ ತೊಂದರೆ, ಸಾವನಪ್ಪುವ ಸಂದರ್ಭವಿದೆ. ಆದ್ದರಿಂದ ಮನೆಯ ಮೇಲ್ಭಾವಣ, ಆವರಣೆದಲ್ಲಿ ಮಣ್ಣಿನ ಮುಚ್ಚಳಿಕೆಯಲ್ಲಿ ನೀರು, ಕಾಳುಗಳನ್ನಿಟ್ಟರೆ ಪಕ್ಷಿಗಳಿಗೆ ತುಂಬಾ ಅನಕೂಲವಾಗುತ್ತದೆ. ಪಕ್ಷಿ ಸಂಕುಲಗಳ ಸಂರಕ್ಷಣೆ ಎಲ್ಲರ ಜವಾಬ್ದಾರಿಯಾಗಿದ್ದು, ಪ್ರತಿಯೊಬ್ಬರಲ್ಲಿ ಜೀವಪರ ಕಾಳಜಿ ಅಗತ್ಯವಾಗಿದೆ. ಪ್ರಾಣಿ-ಪಕ್ಷಿಗಳ ಅಸ್ಥಿತ್ವದ ಮಹತ್ವ ಅರಿತು, ಅವುಗಳ ರಕ್ಷಣೆಗೆ ಮುಂದಾಗಬೇಕಾಗಿದೆ. ನಮ್ಮ ಬಳಗದ ವತಿಯಿಂದ ಪ್ರತಿವರ್ಷ ಬೇಸಿಗೆ ದಿನಗಳಲ್ಲಿ ಮಣ್ಣಿನ ಮುಚ್ಚಳಿಕೆ ವಿತರಣೆ ಮಾಡುವುದರ ಜೊತೆಗೆ ನೀರು, ಕಾಳುಗಳನ್ನು ಇಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ದತ್ತು ಹಡಪದ, ಕರಾವಿಪ ಗ್ರಾಮೀಣ ಘಟಕದ ಮಾಜಿ ಸಂಚಾಲಕ ಶಿವಯೋಗೆಪ್ಪಾ ಎಸ್.ಬಿರಾದಾರ, ಸಮಾಜ ಸೇವಕರಾದ ಅಸ್ಲಾಂ ಶೇಖ್, ಮಹಾದೇವಪ್ಪ ಎಚ್.ಬಿರಾದಾರ, ಪಕ್ಷಿ ಪ್ರೇಮಿ ಮಕ್ಕಳಾದ ಪ್ರೀತಮ್, ಯುವರಾಜ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.