ಕಲಬುರಗಿ: ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯ ಮಟ್ಟದ ಪ್ರತಿಷ್ಠಿತ ‘ಅಮ್ಮ ಪ್ರಶಸ್ತಿ’ಗೆ ನಾಡಿನ ಹತ್ತು ಸಾಹಿತಿಗಳ ಕೃತಿಗಳು ಆಯ್ಕೆಯಾಗಿವೆ ಎಂದು ಪ್ರತಿಷ್ಠಾನದ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.
ವಿದ್ಯಾರಶ್ಮಿ ಪೆಲತ್ತಡ್ಕ (ಕೆರೆ-ದಡ), ಪ್ರಭಾವತಿ ದೇಸಾಯಿ (ಸೆರಗಿಗಂಟಿದ ಕಂಪು), ವೀರೇಂದ್ರ ರಾವಿಹಾಳ್ (ಡಂಕಲ್ ಪೇಟೆ), ಪೂರ್ಣಿಮಾ ಮಾಳಗಿಮನಿ (ಮ್ಯಾಜಿಕ್ ಸೌಟು), ದ್ವಾರನಕುಂಟೆ ಪಾತಣ್ಣ (ರಾಣಿ ಅಹಲ್ಯಾಬಾಯಿ ಹೋಳ್ಕರ್), ಗುರುಪ್ರಸಾದ ಕಂಟಲಗೆರೆ (ಅಟ್ರಾಸಿಟಿ), ಡಾ.ಪರವಿನ ಸುಲ್ತಾನಾ (ಶರಣರ ನಾಡಿನ ಸೂಫಿ ಮಾರ್ಗ), ಡಾ.ಪ್ರಕಾಶ ಭಟ್ (ಹಳ್ಳಿಗಳನ್ನು ಕಟ್ಟುವ ಕಷ್ಟ ಸುಖ), ಡಾ.ಎಚ್.ಎಸ್.ಸತ್ಯನಾರಾಯಣ (ಬಿದಿರ ತಡಿಕೆ) ಹಾಗೂ ಮಂಜುನಾಥ ಚಾಂದ್ (ಪ್ರಿಯ ಮೀರಾ) ಕೃತಿಗಳನ್ನು 24ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಯು ತಲಾ 2,500 ರೂ. ನಗದು ಪುರಸ್ಕಾರ, ನೆನಪಿನ ಕಾಣಿಕೆ, ಪ್ರಮಾಣ ಪತ್ರ, ಸತ್ಕಾರ ಮತ್ತು ಈ ನೆಲದ ಸಿರಿಧಾನ್ಯ ತೊಗರಿಬೇಳೆ ಒಳಗೊಂಡಿರುತ್ತದೆ. ಈ ಬಾರಿ ಎಲ್ಲಾ ವಿಭಾಗದಲ್ಲಿ ಲೇಖಕರು ಪ್ರಶಸ್ತಿಯನ್ನು ಹಂಚಿಕೊಂಡಿದ್ದು, ನ.26 ರಂದು ಸಂಜೆ 5.3.ಕ್ಕೆ ಸೇಡಂ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಜರುಗುವ ಸಮಾರಂಭದಲ್ಲಿ `ಅಮ್ಮ ಪ್ರಶಸ್ತಿ’ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಮ್ಮ ಪ್ರಶಸ್ತಿಗೆ 24ರ ಸಂಭ್ರಮ
ಪತ್ರಕರ್ತ – ಲೇಖಕ ಮಹಿಪಾಲರೆಡ್ಡಿ ಮುನ್ನೂರ್ ಅವರು ತಮ್ಮ ಅಮ್ಮನ ನೆನಪಿನಲ್ಲಿ ಸ್ಥಾಪಿಸಿದ ‘ಅಮ್ಮ ಪ್ರಶಸ್ತಿ’ಗೆ ಈಗ 24ನೇ ವರ್ಷದ ಸಂಭ್ರಮ. ಕನ್ನಡದ ಪ್ರತಿಭಾವಂತ ಬರಹಗಾರರು ಅಮ್ಮ ಪ್ರಶಸ್ತಿಗೆ ತಮ್ಮ ಕೃತಿಗಳನ್ನು ಕಳುಹಿಸುವ ಮೂಲಕ ಪ್ರಶಸ್ತಿಯನ್ನು ಗುರುತಿಸಿದ್ದಾರೆ ಹಾಗೂ ಗೌರವಿಸಿದ್ದಾರೆ. ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ಅಮ್ಮ ಪ್ರಶಸ್ತಿ ರಾಜ್ಯದ ಗಣನೀಯ ಪ್ರಶಸ್ತಿಗಳಲ್ಲಿ ಒಂದಾಗಬೇಕು ಎಂಬ ಪ್ರತಿಷ್ಠಾನದ ಆಶಯಕ್ಕೆ ಅನುಗುಣವಾಗಿ ನಾಡಿನ ಖ್ಯಾತ ಲೇಖಕರು, ಕವಿಗಳು, ಪ್ರಕಾಶಕರು ಮತ್ತು ಲೇಖಕರ ಅಭಿಮಾನಿ ಓದುಗರು ಸ್ಪಂದಿಸಿದ್ದು ಇದೊಂದು ಗೌರವಾನ್ವಿತ ಪ್ರಶಸ್ತಿಯಾಗಿ ರೂಪುಗೊಂಡಿದೆ ಎಂಬುದಕ್ಕೆ ಸಾಕ್ಷಿ ಎಂದು ತಿಳಿಸಿದ್ದಾರೆ.