ಕಲಬುರಗಿ: ಸೇಡಂ ತಾಲೂಕಿನ ತೊಟ್ನಳ್ಳಿ ಗ್ರಾಮದ ಮಹಾಂತೇಶ್ವರ ಮಠದ ಜಮೀನು ಪಹಣಿಯಲ್ಲಿ ವಕ್ಫ್ ಮಂಡಳಿ ಹೆಸರು ನಮೂದಾಗಿರುವದನ್ನು ವಿರೋಧಿಸಿ ಡಾ. ತ್ರಿಮೂರ್ತಿ ಶಿವಾಚಾರ್ಯರು ಬುಧವಾರ ಪಾದಯಾತ್ರೆ ಆರಂಭಿಸುವ ಮುನ್ನವೇ ಪಹಣಿಯಲ್ಲಿನ ವಕ್ಫ್ ಹೆಸರು ತೆಗೆದು ಹಾಕಲಾಗಿದೆ.

ಮಠದ ಡಾ. ತ್ರಿಮೂರ್ತಿ ಶಿವಾಚಾರ್ಯರ ಹೆಸರಿನಲ್ಲಿ 5.24 ಎಕರೆ ಜಮೀನು ಇದೆ. 2018ರಲ್ಲಿ ಮಠದ ಪಹಣಿಯಲ್ಲಿ ಅಶೂರಖಾನಾ ವಕ್ಸ್ ಎಂದು ಸೇರ್ಪಡೆಯಾಗಿತ್ತು. ಇದರ ವಿರುದ್ಧ ಕೆಲ ದಿನಗಳ ಹಿಂದೆಯಷ್ಟೇ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದ್ದರು.
ಬುಧವಾರ ಬೆಳಿಗ್ಗೆ ಡಾ. ತ್ರಿಮೂರ್ತಿ ಶಿವಾಚಾರ್ಯರು ಪಾದಯಾತ್ರೆ ನಡೆಸದಂತೆ ಕೆಲವು ಮುಖಂಡರು ಮನವೊಲಿಸಲು ಪ್ರಯತ್ನಿಸಿದರು. ಇದಕ್ಕೆ ಒಪ್ಪದ ಶಿವಾಚಾರ್ಯರು ಎಲ್ಲಾ ರೈತರ ಪಹಣಿಗಳಲ್ಲಿನ ವಕ್ಫ್ ಮಂಡಳಿ ಹೆಸರು ತೆಗೆಯುವಂತೆ ಪಟ್ಟುಹಿಡಿದು ಪಾದಯಾತ್ರೆ ನಡೆಸಿದರು. ಶ್ರೀಗಳ ಪಾದಯಾತ್ರೆಗೆ ಬಿಜೆಪಿ ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಮತ್ತು ಕಾರ್ಯಕರ್ತರು ಜೊತೆಗೂಡಿದರು.