ಕೆಎಂಎಫ್‌ನ ರೈತ ತರಬೇತಿ ಹಣ ಸ್ವಂತ ಖಾತೆಗೆ ವರ್ಗಾಯಿಸಿಕೊಂಡ ಸಿಬ್ಬಂದಿ ಅಮಾನತು

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ಬೆಂಗಳೂರು
ರೈತರು ಹಾಗೂ ಹಾಲು ಉತ್ಪಾದಕ ಸಹಕಾರ ಸಂಘಗ ಸದಸ್ಯರು, ಸಿಬ್ಬಂದಿಗೆ ತರಬೇತಿ ನೀಡುವ ಕರ್ನಾಟಕ ಹಾಲು ಮಹಾಮಂಡಲ ಮೈಸೂರು ತರಬೇತಿ ಕೇಂದ್ರದಲ್ಲಿ ಕಚೇರಿ ಲೆಕ್ಕ ಸಹಾಯಕ 60 ಲಕ್ಷ ಸ್ವಂತ ಖಾತೆಗೆ ಹಾಕಿಕೊಂಡು ದುರ್ಬಳಕೆ ಮಾಡಿಕೊಂಡಿರುವುದು ಪತ್ತೆಯಾಗಿದೆ.

ಬ್ಯಾಂಕ್‌ನವರು ನೀಡಿದ ಮಾಹಿತಿ ಆಧರಿಸಿ ಎಚ್ಚೆತ್ತುಕೊಂಡು ಕರ್ನಾಟಕ ಹಾಲು ಮಹಾಮಂಡಲದ ಹಿರಿಯ ಅಧಿಕಾರಿಗಳು ಕೂಡಲೆ ಎಚ್ಚೆತ್ತುಕೊಂಡು ಸಿಬ್ಬಂದಿಯಿಂದ ಹಣವನ್ನು ಹಿಂದಕ್ಕೆ ಪಡೆಯಲಾಗಿದೆ. ಅಲ್ಲದೆ ಸಿಬ್ಬಂದಿ ಅಮಾನತುಗೊಳಿಸಲಾಗಿದ್ದು, ವಜಾಕ್ಕೂ ಪರಿಶೀಲಿಸಲಾಗುತ್ತಿದೆ.

ಆಗಸ್ಟ್‌ 7ರ ಸಂಜೆ ಕೆಲಸ ಮುಗಿಸಿ ಹೋಗಿದ್ದ ಕೆಎಂಎಫ್‌ ಮೈಸೂರು ತರಬೇತಿ ಕೇಂದ್ರದ ಕಚೇರಿ ಸಹಾಯಕ (ದರ್ಜೆ–1) ರಾಜಶೇಖರ್ ಎಂಬುವವರು ಸುಮಾರು 60 ಲಕ್ಷ ವನ್ನು ಹಂತಹಂತವಾಗಿ ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದರು. ಮರು ದಿನ ಬೆಳಿಗ್ಗೆ ಮೊತ್ತ ವರ್ಗಾವಣೆಯಾಗಿದ್ದನ್ನು ಗಮನಿಸಿದ್ದ ಕೆನರಾ ಬ್ಯಾಂಕ್‌ ಅಧಿಕಾರಿಗಳು ಕೆಎಂಎಫ್‌ ಬೆಂಗಳೂರು ಕಚೇರಿ ಗಮನಕ್ಕೆ ತಂದಿದ್ದರು.

ಇದಾದ ಬಳಿಕೆ ಮಾಹಿತಿ ಕಲೆಹಾಕಿದಾಗ ರಾಜಶೇಖರ್ ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದು ಪತ್ತೆಯಾಗಿತ್ತು. ಹಂತ ಹಂತವಾಗಿ ಈ ಮೊತ್ತವನ್ನು ವರ್ಗಾಯಿಸಿಕೊಂಡಿರುವುದು ತಿಳಿದುಬಂದಿತ್ತು. ಈ ಮೊತ್ತ ಹಿಂದಕ್ಕೆ ಪಡೆಯಲಾಗಿತ್ತು.

ಕಚೇರಿ ಸಹಾಯಕರಿಗೆ ಆರ್ಥಿಕ ವಿಭಾಗದಿಂದಲೆ ವಹಿವಾಟು ನಡೆಸಲು ಅನುಮತಿ ನೀಡಲಾಗುತ್ತಿರುತ್ತದೆ. ಅವರಿಗೆ ಮೊಬೈಲ್‌ ನೀಡಿದ್ದು ಒಟಿಪಿ ಬರುವ ವ್ಯವಸ್ಥೆ ಇರುತ್ತದೆ. ತಮಗೆ ನೀಡಿರುವ ಅಧಿಕಾರವನ್ನು ಅವರು ದುರುಪಯೋಗ ಪಡಿಸಿಕೊಂಡಿರುವುದು ಖಚಿತವಾಗಿರುವ ಹಿನ್ನೆಲೆಯಲ್ಲಿ ಅಮಾನತು ಕೂಡ ಮಾಡಲಾಗಿದೆ ಎಂದು ಕೆಎಂಎಫ್ ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದರು.

ಈ ಕುರಿತು ಮೈಸೂರಿನ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹಿರಿಯ ಅಧಿಕಾರಿಗಳು ತನಿಖೆ ಕೈಗೊಂಡಿದ್ದು, ವರದಿ ಬಂದ ನಂತರ ವಜಾ ಪ್ರಕ್ರಿಯೆ ಆರಂಭಿಸಲಾಗುತ್ತದೆ ಎಂದು ಹೇಳಿದರು.

ಕರ್ನಾಟಕದಲ್ಲಿ ಬೆಂಗಳೂರು, ಮೈಸೂರು, ಧಾರವಾಡ, ಕಲಬುರಗಿ ಸಹಿತ ನಾಲ್ಕು ಕಡೆ ತರಬೇತಿ ಕೇಂದ್ರಗಳಿವೆ. ಇಲ್ಲಿ ನಿತ್ಯ ರೈತರು, ಹಾಲು ಉತ್ಪಾದಕರು, ಸಿಬ್ಬಂದಿಗೆ ತರಬೇತಿಗಳನ್ನು ಆಯೋಜಿಸಲಾಗುತ್ತದೆ. ಊಟ, ವಸತಿ ಸಹಿತ ನಾನಾ ಖರ್ಚಿಗೆಂದು ಹಣವನ್ನು ತರಬೇತಿ ಕೇಂದ್ರಗಳಿಗೆ ಹಂಚಿಕೆ ಮಾಡಲಾಗುತ್ತದೆ. ಕಚೇರಿಯ ಅಧಿಕಾರಿಗಳು ಮತ್ತು ಕೆಲ ಸಿಬ್ಬಂದಿಗೆ ಮಾತ್ರ ಇದರ ಬಳಕೆ ಅಧಿಕಾರವಿದೆ. ಇದೆ ಹಣ ಈಗ ದುರುಪಯೋಗವಾಗಿದೆ ಎನ್ನುವುದು ಅಧಿಕಾರಿ ವಿವರಣೆ.

ಕರ್ನಾಟಕ ಹಾಲು ಮಹಾಮಂಡಳವು ವಾರ್ಷಿಕವಾಗಿ 25 ಸಾವಿರ ಕೋಟಿವರೆಗೂ ವಹಿವಾಟು ನಡೆಸುತ್ತಿದ್ದು, ಪ್ರತಿ ನಿತ್ಯ 100 ಕೋಟಿವರೆಗೂ ವಹಿವಾಟು ಇರಲಿದೆ, ಹಣಕಾಸು ಸಾಕಷ್ಟು ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದರೂ ಕೆಲವೊಮ್ಮೆ ದುರ್ಬಳಕೆ ಆಗುವುದುಂಟು. ಹಿಂದೊಮ್ಮೆ ಬಳ್ಳಾರಿ ಹಾಲು ಒಕ್ಕೂಟದಲ್ಲಿ ವಿಮೆ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದ ಪ್ರಕರಣವೂ ನಡೆದು ಕ್ರಮ ಕೈಗೊಳ್ಳಲಾಗಿತ್ತು ಎಂದು ತಿಳಿಸಿದರು.

Leave a Reply

Your email address will not be published. Required fields are marked *