ಸುದ್ದಿ ಸಂಗ್ರಹ ಚಿತ್ತಾಪುರ
ಪಟ್ಟಣದ ವೆಂಕಟೇಶ್ವರ ಕಾಲೋನಿಯಲ್ಲಿ ಮಂಗಳವಾರ ರಾತ್ರಿ 3 ಗಂಟೆ ಸುಮಾರಿಗೆ ಒಂದು ಬೈಕ್ ಮತ್ತು ಮನೆ ಕಳ್ಳತನವಾದ ಘಟನೆ ನಡೆದಿರುವದು ವರದಿಯಾಗಿದೆ. ಕಳ್ಳರ ಚಲನವಲನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಾಟಮದೇವರಹಳ್ಳಿಯ ನಿವಾಸಿ ರಮೇಶ ಶರಣಪ್ಪ ಬೋವಿ ಅವರ ಮನೆಯಿಂದ 10 ಗ್ರಾಂ ಚಿನ್ನ, 16 ತೊಲೆ ಬೆಳ್ಳಿ ಮತ್ತು 1,500 ರೂ.ನಗದು ದೋಚಿದ್ದಾರೆ.
ಕಾಲೋನಿಯಲ್ಲಿರುವ ಜಗನ್ನಾಥ ಗುತ್ತೇದಾರ, ಚಂದಯ್ಯ ಗುತ್ತೇದಾರ ಅವರ ಮನೆ ಮುಂಭಾಗ ನಿಲ್ಲಿಸಿದ್ದ ಪಲ್ಸರ್ ಬೈಕ್ ಕಳ್ಳತನವಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಅದೆ ರೀತಿ ಸುರೇಶ ಲಕ್ಷ್ಮಣ ಸರಾಫ್ ಅವರ ಮನೆಯ ಬಾಗಿಲಿನ ಕೀಲಿ ಕೈ ಮುರಿದು ಕಳ್ಳತನಕ್ಕೆ ಯತ್ನಿಸಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಪಿಎಸ್ಐ ಮಂಜುನಾಥರೆಡ್ಡಿ, ಸಿಬ್ಬಂದಿಗಳಾದ ಸಿದ್ದು ಮಡಿವಾಳ, ಅನೀಲಕುಮಾರ, ರವಿಕುಮಾರ, ಬೆರಳಚ್ಚು ತಜ್ಞರು, ಶ್ವಾನ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ಪರೀಶಿಲನೆ ನಡೆಸಿದರು.
ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಈ ಕುರಿತು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.