ರಾವೂರ ಮಕ್ಕಳಿಂದ ಒಂದು ದಿನದ ಶಾಲಾ ಆಡಳಿತ

ಸುದ್ದಿ ಸಂಗ್ರಹ

ಚಿತ್ತಾಪುರ: ಶಾಲಾ ಆಡಳಿತ ಎಂಬ ವಿಶಿಷ್ಟ ಪ್ರಯೋಗದ ಮೂಲಕ ಮಕ್ಕಳಲ್ಲಿ ಬೋಧನಾ ಸಾಮಾರ್ಥ್ಯ, ಕೌಶಲ್ಯ ತುಂಬುವ ಪ್ರಯತ್ನ ರಾವೂರ ಗ್ರಾಮದ ಸಚ್ಚಿದಾನಂದ ಪ್ರೌಢ ಶಾಲೆಯ ಶಿಕ್ಷಕರ ನೆರವಿನಿಂದ ಮಕ್ಕಳು ಅತ್ಯಂತ ಸಮರ್ಥವಾಗಿ ನಿರ್ವಹಿಸಿದರು. ಈ ಪ್ರಯೋಗದಲ್ಲಿ ಮಕ್ಕಳೆ ಶಿಕ್ಷಕರು, ಶಿಕ್ಷಕರೆ ಮಕ್ಕಳಾಗಿ ಒಂದು ದಿನದ ಮಟ್ಟಿಗೆ ಮಕ್ಕಳೆ ಮುಖ್ಯಗುರುಗಳಾಗಿ, ವರ್ಗಶಿಕ್ಷಕರಾಗಿ, ಶಿಕ್ಷಕರಾಗಿ, ದೈಹಿಕ ಶಿಕ್ಷಕರಾಗಿ ಉತ್ತಮ ರೀತಿಯಲ್ಲಿ ಪಾತ್ರ ನಿಭಾಯಿಸಿ ಶಿಕ್ಷಕರ ಮತ್ತು ಆಡಳಿತ ಮಂಡಳಿಯ ಮೆಚ್ಚುಗೆ ಪಡೆದರು.

ಬಣ್ಣ ಬಣ್ಣದ ಸೀರೆಯುಟ್ಟ ವಿದ್ಯಾರ್ಥಿನಿಯರು, ವಿದ್ಯಾರ್ಥಿಗಳು ಶಿಸ್ತುಬದ್ಧವಾಗಿ ಬೆಳಿಗ್ಗೆ ಪ್ರಾರ್ಥನೆ ಮಾಡಿಸುವುದರಿಂದ ಹಿಡಿದು ಶಾಲೆ ಬಿಡುವವರೆಗೆ ವಿದ್ಯಾರ್ಥಿ ಶಿಕ್ಷಕರು ವಾರದ ಹಿಂದೆ ತಮಗೆ ವಹಿಸಿದ್ದ ವಿಷಯವಾರು ಮತ್ತು ತರಗತಿವಾರು ಬೋಧನಾ ಅಂಶಗಳ ಪೂರ್ವ ತಯಾರಿ ಮಾಡಿಕೊಂಡು ತಾವು ಮಾಡುವ ಪಾಠಕ್ಕೆ ಪೂರಕವಾಗಿ ಮಾದರಿ ಚಾರ್ಟ್ ತಯಾರಿ ಮಾಡಿಕೊಂಡು ಶಿಕ್ಷಕರ ಸಮ್ಮುಖದಲ್ಲಿ ವಿಷಯ ಶಿಕ್ಷಕರ ವರ್ತನೆಗಳನ್ನು ಅನುಕರಣೆ ಮಾಡುತ್ತಾ ಪಾಠ ಮಾಡಿ ತಮ್ಮ ಬೋಧನಾ ಕೌಶಲ್ಯ ಪ್ರದರ್ಶಿಸಿದರು.

ಹತ್ತನೇ ವಾರ್ಷಿಕ ಪರೀಕ್ಷೆಗೆ ಮಹತ್ವದ ಪಾಠಗಳನ್ನು ಆಯ್ಕೆ ಮಾಡಿಕೊಂಡು ಮಕ್ಕಳು ಸುಲಲಿತವಾಗಿ ಬೋಧನೆ ಮಾಡಿದ್ದು ಮಕ್ಕಳ ಸಾಮಾರ್ಥ್ಯ ಎತ್ತಿ ತೋರಿಸಿತು. ಪ್ರೌಢ ಶಾಲೆಯ ಆಯ್ದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಒಂದು ದಿನದ ಶಾಲಾ ಆಡಳಿತದಲ್ಲಿ ಮಾಲ್ಗೊಂಡು ತಾವೆ ಶಿಕ್ಷಕರೆಂದು ಭಾವಿಸಿ ಧೈರ್ಯದಿಂದ ಪಾಠ ಮಾಡಿದರು, ಇದನ್ನು ಸಂಸ್ಥೆಯ ಅಧ್ಯಕ್ಷ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ಹಾಗೂ ಕಾರ್ಯದರ್ಶಿ ಡಾ. ಗುಂಡಣ್ಣ ಬಾಳಿ ಪ್ರತಿ ತರಗತಿಗಳಿಗೆ ತೆರಳಿ ಪ್ರತಿ ವಿದ್ಯಾರ್ಥಿಗಳ ಪಾಠಗಳನ್ನು ವೀಕ್ಷಿಸಿ ಮಕ್ಕಳನ್ನು ಹುರುದುಂಬಿಸಿದರು ಮತ್ತು ಕೆಲವು ಸಲಹೆ ಸೂಚನೆಗಳನ್ನು ನೀಡಿ ಬೆನ್ನು ತಟ್ಟಿದ್ದರು.

ಪ್ರೌಢ ಶಾಲೆಯ ಮುಖ್ಯಗುರು ವಿದ್ಯಾಧರ ಖಂಡಳ ಸೇರಿದಂತೆ ಶಿಕ್ಷಕರು ವೀಕ್ಷಕರಾಗಿ ಮಕ್ಕಳ ಬೋಧನೆಯನ್ನು ಕುತೂಹಲದಿಂದ ಆಲಿಸಿದರು.

ಅಕ್ಷತಾ (ವಿದ್ಯಾರ್ಥಿನಿ): ನಮ್ಮನ್ನು ಶಿಕ್ಷಕರು ಎಂದು ಆಯ್ಕೆ ಮಾಡಿದ್ದು ಬಹಳ ಸಂತೋಷವಾಯಿತು. ಈ ಹಂತದಲ್ಲೇ ಯಾವ ರೀತಿ ಬೋಧನೆ ಮಾಡಬೇಕು ಎಂಬ ಸಣ್ಣ ಪ್ರಯತ್ನ ಮಾಡಿದೆವು. ಇದರಿಂದ ಧೈರ್ಯ, ಆತ್ಮವಿಶ್ವಾಸ, ವಿಷಯದ ಅಧ್ಯಯನ, ಅನೇಕ ಸಂಗತಿಗಳು ನಮ್ಮಲ್ಲಿ ಮೂಡಿದವು. ಅವಕಾಶ ನೀಡಿದ ಶಿಕ್ಷಕರಿಗೆ ತುಂಬಾ ಧನ್ಯವಾದಗಳು.

ಸಿದ್ದಲಿಂಗ ಮಹಾಸ್ವಾಮಿಗಳು (ಸಂಸ್ಥೆಯ ಅಧ್ಯಕ್ಷರು):
ಮಕ್ಕಳಲ್ಲಿ ಪ್ರತಿಭೆ ಇದೆ ಆ ಪ್ರತಿಭೆ ಅನಾವರಣಕ್ಕೆ ಸೂಕ್ತ ಅವಕಾಶ ಕೊಡುತ್ತಿದ್ದೆವೆ. ನಮ್ಮ ಕ್ರಿಯಾಶೀಲ ಶಿಕ್ಷಕರು ಇಂತಹ ಪ್ರಯತ್ನ ಗಳನ್ನು ಮಾಡುವ ಮೂಲಕ ಮಕ್ಕಳನ್ನು ಕ್ರಿಯಾಶೀಲರನ್ನಾಗಿ ಮಾಡುತ್ತಿರುವುದು ಶ್ಲಾಘನೀಯ.

Leave a Reply

Your email address will not be published. Required fields are marked *