ಕಲಬುರಗಿ: ಪ್ರಸ್ತುತ ದಿನಗಳಲ್ಲಿ ಸಣ್ಣ ವಿಷಯಕ್ಕೂ ಕೌಟುಂಬಿಕ ಕಲಹದಿಂದಾಗಿ, ಅವಿಭಕ್ತ ಕುಟುಂಬಗಳು ನಾಶವಾಗಿ ಒಡೆದ ಮನಸ್ಸುಗಳಾಗುತ್ತಿವೆ. ಮಹಿಳೆಯರು ಎಲ್ಲವನ್ನು ಸಾಧಿಸಬಹುದೆಂದು ತೋರಿಸಿದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ಆದರ್ಶ ವ್ಯಕ್ತಿತ್ವ ಸಮಸ್ತ ಮಹಿಳಾ ಲೋಕಕ್ಕೆ ಮಾದರಿಯಾಗಿದೆ, ಸ್ತ್ರೀಕುಲದ ಅನರ್ಘ್ಯ ರತ್ನವಾಗಿದ್ದಾರೆ ಎಂದು ಶರಣ ಚಿಂತಕ ಎಚ್.ಬಿ ಪಾಟೀಲ ಹೇಳಿದರು.
ನಗರದ ನ್ಯೂ ರಾಘವೇಂದ್ರ ಕಾಲೋನಿಯ ಮುತ್ತಾ ಟ್ಯುಟೋರಿಯಲ್ಸ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದಿಂದ ಶನಿವಾರ ಜರುಗಿದ ‘ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ 603ನೇ ಜಯಂತಿ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಲ್ಲಮ್ಮನವರು ಸಾಕಷ್ಟು ಕಷ್ಟಗಳನ್ನು ಅನುಭವಿಸಿ, ಅವುಗಳೆಲ್ಲವನ್ನು ಮೆಟ್ಟು ನಿಂತು, ಆದರ್ಶ ಗೃಹಣಿಯಾಗಿ, ಶ್ರೇಷ್ಠ ಶಿವಶರಣೆಯಾಗಿ ಮಹಿಳಾ ಲೋಕ ಮತ್ತು ಸಮಾಜಕ್ಕೆ ಪ್ರಸ್ತತ ಸಂದರ್ಭದಲ್ಲೂ ಕೂಡಾ ಮಾದರಿಯಾಗಿದ್ದಾರೆ. ಅವರಲ್ಲಿರುವ ಪರೋಪಕಾರ, ತ್ಯಾಗ, ಸಂಸ್ಕಾರ, ಗುರು-ಹಿರಿಯರ ಬಗ್ಗೆ ಅಪಾರವಾದ ಗೌರವ, ಭಕ್ತಿ, ಸಮಾಜ ಸೇವೆಯಂತಹ ಮುಂತಾದ ಆದರ್ಶ ಮೌಲ್ಯಗಳುಳ್ಳ ಮಹಿಳಾ ಲೋಕದ ಧೃವತಾರೆಯಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥ ಶಿವಕುಮಾರ ಮುತ್ತಾ, ಶಿಲ್ಪಕಲಾವಿದ ಚಂದ್ರಶೇಖರ ವೈ.ಶಿಲ್ಪಿ, ಚಿಂತಕ ಶಿವಯೋಗೆಪ್ಪಾ ಎಸ್ ಬಿರಾದಾರ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.