ವಾಡಿ: ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ ಎನ್ನುವ ಮೂಲಕ ಮಾನವೀಯತೆ ಮತ್ತು ಸಮಾನತೆಯ ತತ್ವಗಳೊಂದಿಗೆ ಜಗ ಬೆಳಗಿದ ಬಸವ ಎಂದು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ವಿಶ್ವಗುರು ಬಸವಣ್ಣನವರ 893ನೇ ಜಯಂತಿ ಆಚರಣೆಯಲ್ಲಿ ಮಾತನಾಡಿದ ಅವರು, ನಾನು ಎಂಬ ಅಹಂ ಬಿಟ್ಟು ನಾವು ಎಂಬ ಭಾವನೆಯ ಬದುಕು ಸಾಗಿಸಬೇಕು ಎಂದು ತಿಳಿಸಿ, ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರು ಹೆಣ್ಣಿನ ಬಗ್ಗೆ ಅತ್ಯಂತ ಅಭಿಮಾನದಿಂದ ದನಿ ಎತ್ತಿದ್ದಾರೆ. ಹೆಣ್ಣಿನ ಬಗ್ಗೆ ಭಾರತೀಯ ವೈದಿಕ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದ್ದ ಕೀಳುಭಾವನೆ, ಅಸಮಾನತೆಯನ್ನು ಬಸವಣ್ಣನವರ ಈ ಚಳವಳಿ ತೊಡೆದು ಹಾಕಿದೆ. ಹೆಣ್ಣು ಮಾಯೆಯಲ್ಲ, ಆತ್ಮಕ್ಕೆ ಲಿಂಗಭೇದವಿಲ್ಲ, ಹೆಣ್ಣು ಅಸ್ಪೃಶ್ಯಳಲ್ಲ. ಹೆಣ್ಣು ಪ್ರತ್ಯಕ್ಷ ದೇವತೆ, ಪರಸ್ತ್ರೀ ಪಾರ್ವತಿಯ ಸಮಾನ ಎಂದು ಸಾರುವ ಮೂಲಕ ಸ್ತ್ರೀ ಸಮಾನತೆಯನ್ನು ಪ್ರತಿಪಾದಿಸಿದ ಹಿರಿಮೆ ಬಸವಣ್ಣನವರಿಗೆ ಮತ್ತು ಅವರ ಸಮಕಾಲೀನ ಶರಣರಿಗೆ ಸಲ್ಲುತ್ತದೆ ಎಂದರು.
ವರ್ಣರಹಿತ ಸಮಾಜ ನಿರ್ಮಾಣ, ಅಸ್ಪೃಶ್ಯತೆ ನಿವಾರಣೆ, ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ, ಲಿಂಗ ಸಮಾನತೆ, ಕಾಯಕ ಮತ್ತು ದಾಸೋಹದ ಮೂಲಕ ಆರ್ಥಿಕ ನ್ಯಾಯ, ವಚನಗಳಲ್ಲಿ ಮಾನವ ಹಕ್ಕುಗಳ ಪ್ರತಿಪಾದನೆ, ಅಂತರಜಾತೀಯ ವಿವಾಹದಂತಹ ಕ್ರಾಂತಿಕಾರಕ ಕಾರ್ಯಗಳು ಮಾಡುವ ಮೂಲಕ ಸೃಷ್ಟಿಯಲ್ಲಿ ಸರ್ವರಿಗೂ ಸಮಪಾಲು ಎಂದು ಸಾರಿದ ಸಾಂಸ್ಕೃತಿಕ ನಾಯಕ ಎಂದರು.
ಈ ಸಂದರ್ಭದಲ್ಲಿ ಯಮನಪ್ಪ ಸವನಳ್ಳಿ, ಶರಣಗೌಡ ಚಾಮನೂರ, ಅಶೋಕ ಹರನಾಳ,ಅರ್ಜುನ ಕಾಳೆಕರ, ಗಿರಿಮಲ್ಲಪ್ಪ ಕಟ್ಟಿಮನಿ, ಭೀಮರಾವ ದೊರೆ, ಪ್ರಕಾಶ ಪುಜಾರಿ, ಹರಿ ಗಲಾಂಡೆ, ಆಯ್ಯಣ್ಣ ದಂಡೊತಿ, ಮಲ್ಲಿಕಾರ್ಜುನ ಸಾತಖೇಡ, ಯಂಕಮ್ಮ ಗೌಡಗಾಂವ, ನಿರ್ಮಲ ಇಂಡಿ, ಉಮಾಭಾಯಿ ಗೌಳಿ ಸೇರಿದಂತೆ ಅನೇಕರು ಇದ್ದರು.