ಸುದ್ದಿ ಸಂಗ್ರಹ ಕಲಬುರಗಿ
ಕನ್ನಡದ ಮೊದಲ ಲಾಕ್ಷಣಿಕ ಗ್ರಂಥ ‘ಕವಿರಾಜಮಾರ್ಗ’ ಕೊಟ್ಟು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಮಾರ್ಗ ನೀಡಿದ ಕನ್ನಡದ ಪ್ರಖ್ಯಾತ ದೊರೆ ನೃಪತುಂಗ ಅಮೋಘವರ್ಷ ಆಡಳಿತದ ‘ರಾಷ್ಟ್ರಕೂಟ’ ಹೆಸರಿನಲ್ಲಿ ಪ್ರಾಧಿಕಾರ ಅಥವಾ ಪ್ರತಿಷ್ಠಾನ ಸ್ಥಾಪಿಸುವಂತೆ ಹಿರಿಯ ಸಾಹಿತಿ, ಪತ್ರಕರ್ತ, ನಟ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ಸೇಡಂ ಸರಕಾರಕ್ಕೆ ಮನವಿ ಮಾಡಿದ್ದಾರೆ.
ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರಿಗೆ ಪತ್ರ ಬರೆದಿರುವ ಅವರು, ರಾಷ್ಟ್ರಕೂಟ ಸಾಮ್ರಾಜ್ಯದಲ್ಲಿ ಕನ್ನಡಕ್ಕೆ ಮೇರು ಕೀರ್ತಿ ತಂದಿರುವ ಶ್ರೀವಿಜಯನ ಕವಿರಾಜಮಾರ್ಗದ ಮೂಲಕ ಕನ್ನಡ ಸಾಹಿತ್ಯ ಮತ್ತು ಇತಿಹಾಸ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ಎನಿಸಿದ್ದು, ಕನ್ನಡವನ್ನು ವಿಶ್ವಮಾನ್ಯತೆ ದರ್ಜೆಗೇರಿಸಿರುವ ಹಿನ್ನೆಲೆಯಲ್ಲಿ ರಾಷ್ಟ್ರಕೂಟ ಹೆಸರಿನಲ್ಲಿ ಪ್ರಾಧಿಕಾರ ಅಥವಾ ಪ್ರತಿಷ್ಠಾನ ಸ್ಥಾಪಿಸುವ ಮೂಲಕ ಕನ್ನಡದ ಸಾರಸ್ವತಲೋಕದ ಕಾರ್ಯಗಳಿಗೆ ಇಂಬು ನೀಡಿದಂತಾಗುತ್ತದೆ ಎಂದು ತಿಳಿಸಿದ್ದಾರೆ.
ಕಾವ್ಯ ಕ್ಷೇತ್ರಕ್ಕೊಂದು ರಾಜಮಾರ್ಗ ಹಾಕಿಕೊಟ್ಟ ರಾಷ್ಟ್ರಕೂಟ ಹೆಸರಿನಲ್ಲಿ ಸರಕಾರ ಸಂಸ್ಥೆಯೊಂದು ಸ್ಥಾಪಿಸಿ, ಆ ಮೂಲಕ ಕಾವ್ಯ ಕ್ಷೇತ್ರವನ್ನು ಹಾಗೂ ಇತಿಹಾಸದ ಇನ್ನಷ್ಟು ಹೊಳಹುಗಳನ್ನೊಳಗೊಂಡಂತೆ ಅನೇಕ ಕಾರ್ಯಕ್ರಮಗಳು ರೂಪಿಸಬಹುದು. ಕನ್ನಡ ಸಾಹಿತ್ಯದ ಮೊದಲ ಲಾಕ್ಷಣಿಕ ಗ್ರಂಥ ಎಂಬ ಕಾರಣಕ್ಕಾಗಿ ಸಾಹಿತ್ಯ ಮತ್ತು ಇತಿಹಾಸ ಕ್ಷೇತ್ರದಲ್ಲಿ ರಾಷ್ಟ್ರಕೂಟ ಹೆಸರಿನಲ್ಲಿ ಪ್ರಶಸ್ತಿಯೊಂದನ್ನು ಸ್ಥಾಪಿಸಬೇಕು ಮತ್ತು ರಾಷ್ಟ್ರಕೂಟರ ಆಡಳಿತದಲ್ಲಿ ರಾಜಧಾನಿಯಾಗಿದ್ದ ಮಳಖೇಡ (ಮಾನ್ಯಖೇಟ)ವನ್ನು ವಿಶ್ವಮಾನ್ಯತೆಯ ಮಟ್ಟಕ್ಕೆ ಅಭಿವೃದ್ಧಿಪಡಿಸಬೇಕು ಎಂದು ಕೋರಿದ್ದಾರೆ.