ಕಲಬುರಗಿ: ಯೋಜನೆಯುತ ಕಾರ್ಯದಿಂದ ಯಶಸ್ಸು ಸಾಧ್ಯವಿದೆ. ಸೂಕ್ತ ವಿನ್ಯಾಸ, ಯೋಜನೆ ಮತ್ತು ಮೇಲ್ವಿಚಾರಣೆಯ ಕಾರ್ಯ ಮಾಡುವ ಮೂಲಕ ಯಾವುದೆ ರೀತಿಯ ಕಟ್ಟಡ, ನಿರ್ಮಾಣ ಕಾರ್ಯಗಳನ್ನು ಮಾಡುವ ವಾಸ್ತುಶಿಲ್ಪಿಗಳ ಕಾರ್ಯ ಪ್ರಮುಖವಾಗಿದೆ. ಇಂದು ನಾವು ಕಾಣುವ ಅದ್ಭುತವಾದ ಕಟ್ಟಡಗಳ ಹಿಂದೆ ಅವರ ಶ್ರಮ ಮರೆಯುವಂತಿಲ್ಲ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ್ ಹೇಳಿದರು.
ನಗರದ ಆಳಂದ ರಸ್ತೆಯ ಶಿವ ನಗರದ ಜ್ಞಾನ ಚಿಗುರು ಟ್ಯುಟೋರಿಯಲ್ಸ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಸೋಮವಾರ ಬೆಳಿಗ್ಗೆ ಜರುಗಿದ ‘ವಿಶ್ವ ಆರ್ಕಿಟೆಕ್ಟ್ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದ ಅವರು, ಹಿಂದು ಧರ್ಮದಲ್ಲಿ ವಿಶ್ವಕರ್ಮ ಅವರನ್ನು ಪ್ರಥಮ ವಾಸ್ತುಶಿಲ್ಪಿ ಎಂದು ಉಲ್ಲೇಖಿಸಲಾಗಿದೆ. ಈ ಹಿನ್ನಲೆ ಗಮನಿಸಿದಾಗ ಪ್ರತಿವರ್ಷ ಅಕ್ಟೋಬರ್ ತಿಂಗಳಿನ ಮೊದಲನೇ ಸೋಮವಾರದಂದು ವಾಸ್ತುಶಿಲ್ಪಿಗಳ ದಿನಾಚರಣೆ ಆಚರಿಸಲಾಗುತ್ತದೆ. ‘ಫ್ರಾಂಕ್ ಲಿಯಾಡ್ ರೈಟ್’ ಎಂಬ ಅಮೇರಿಕನ್ ಆರ್ಕಿಟೆಕ್ಟ್ ಅವರ ಸ್ಮರಣಾರ್ಥವಾಗಿ ಇದನ್ನು ಆಚರಿಸಲಾಗುತ್ತದೆ. ಇಟಲಿ, ಜೆರ್ಮನಿ, ಸ್ಪೇನ್, ಯುಕೆ, ಫ್ರಾನ್ಸ್, ಜಪಾನ್, ಕೆನಡಾ, ಆಸ್ಟ್ರೇಲಿಯಾ, ನೆದರಲ್ಯಾಂಡ್ ಮತ್ತು ಚೀನಾ ದೇಶಗಳು ಪ್ರಸಿದ್ಧ ವಾಸ್ತುಶಿಲ್ಪ ರಾಷ್ಟ್ರಗಳಾಗಿವೆ. ನಮ್ಮ ದೇಶವು ಕೂಡಾ ಈ ನಿಟ್ಟಿನಲ್ಲಿ ಸಾಧನೆಯಲ್ಲಿದೆ. ಭಾರದತ ಆಧುನಿಕ ವಾಸ್ತುಶಿಲ್ಪಿ ಎಂದು ಬಿ.ವಿ ದೇಸಾಯಿ ಅವರನ್ನು ಕರೆಯಲಾಗುತ್ತದೆ. ಈ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿದ್ದು, ಯುವಕರು ಇದರ ಸದುಪಯೋಗ ಮಾಡಿಕೊಳ್ಳಲು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಸಂಸ್ಥೆಯ ಅಧ್ಯಕ್ಷ ಅಮರ ಜಿ.ಬಗರಗಿ, ಪ್ರಮುಖರಾದ ಅಸ್ಲಾಂ ಶೇಖ್, ಮಹಾದೇವಪ್ಪ ಎಚ್.ಬಿರಾದಾರ ಮತ್ತು ವಿದ್ಯಾರ್ಥಿಗಳು ಇದ್ದರು.