ಸುದ್ದಿ ಸಂಗ್ರಹ ಭುವನೇಶ್ವರ
ಒಡಿಶಾದ ರಾಜ್ಯದ ಗೃಹ ಇಲಾಖೆಯಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಐಎಎಸ್ ಅಧಿಕಾರಿಯೊಬ್ಬರ ವಿರುದ್ಧ 95 ಲಕ್ಷ ರೂ. ವಂಚನೆ ಹಾಗೂ ಕೊಲೆ ಬೆದರಿಕೆ ಆರೋಪ ಕೇಳಿಬಂದಿದೆ.
ಐಎಎಸ್ ಅಧಿಕಾರಿ ಆರಾಧನಾ ದಾಸ್ ವ್ಯಕ್ತಿಯೊಬ್ಬರಿಗೆ ಭೂಮಿ ಕೊಡಿಸುವ ಭರವಸೆ ನೀಡಿ 95 ಲಕ್ಷ ರೂ. ಹಣ ಪಡೆದು ವಂಚಿಸಿದ್ದಾರೆ. ಭೂಮಿ ಸಿಗದ ಕಾರಣ ಹಣ ವಾಪಸ್ ಕೇಳಿದಾಗ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಏನಿದು ಘಟನೆ ?
ಆರಾಧನಾ ದಾಸ್ ಅವರು ಕಟಕ್ ಜಿಲ್ಲೆಯ ಸಿಡಿಎ (ಕಟಕ್ ಅಭಿವೃದ್ಧಿ ಪ್ರಾಧಿಕಾರ) ಪ್ರದೇಶದಲ್ಲಿ ಭೂಮಿ ಕೊಡಿಸುವ ಭರವಸೆ ನೀಡಿ ವಿಶೇಷ ಚೇತನ ವ್ಯಕ್ತಿ ಕಮಲಕುಮಾರ್ ಅವರಿಂದ 95 ಲಕ್ಷ ರೂ. ಹಣ ಪಡೆದಿದ್ದರು. ದೂರುದಾರನ ಪತ್ನಿ ಬೀನಾ ಭಾವ್ಸಿಂಕಾ, ಆರಾಧನಾ ದಾಸ್ ಅವರಿಗೆ ಬೇರೆ ಬೇರೆ ದಿನಾಂಕದಂದು ಬ್ಯಾಂಕ್ ಆಫ್ ಇಂಡಿಯಾ ಮೂಲಕ ಹಣ ಪಾವತಿ ಮಾಡಿದ್ದರು. ಆದರೀಗ ಭೂಮಿ ಕೊಡಿಸದೆ, ಕೊಟ್ಟ ಹಣವನ್ನೂ ವಾಪಸ್ ಕೊಡದೆ ವಂಚಿಸಿದ್ದಾರೆ. ಹಣ ವಾಪಸ್ ಕೇಳಿದರೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಕಮಲ್ ದೂರಿನಲ್ಲಿ ಆರೋಪಿಸಿದ್ದಾರೆ.
ಈ ಸಂಬಂಧ ಸಿಡಿಎ ಹಂತ-II ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖಾ ವರದಿಯು ಭೂಮಿ ಭರವಸೆಗೆ ಸಂಬಂಧಿಸಿದಂತೆ 95 ಲಕ್ಷ ರೂ. ವಹಿವಾಟು ನಡೆದಿರುವುದನ್ನು ಖಚಿತಪಡಿಸಿದೆ. ಅದರಲ್ಲಿ 1 ಭಾಗ ನಗದು ರೂಪದಲ್ಲಿ ಪಾವತಿಸಲಾಗಿದೆ.
ಸದ್ಯ ಆರಾಧನಾ ದಾಸ್ ಅವರು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಪೊಲೀಸರು ಮೇಲಾಧಿಕಾರಿಗಳಿಗೆ ಆರೋಪಿಸಿದ್ದಾರೆ. ಹಾಗಾಗಿ ಐಎಎಸ್ ಅಧಿಕಾರಿಯ ವಿರುದ್ಧ (ಸರ್ಕಾರಿ ನೌಕರರು/ಐಎಎಸ್ ಅಧಿಕಾರಿಗಳಿಗೆ ನಿಯಮಗಳ ಅಡಿಯಲ್ಲಿ ಅಗತ್ಯವಿರುವಂತೆ) ಔಪಚಾರಿಕ ಕ್ರಮ ಕೈಗೊಳ್ಳಲು ಅನುಮತಿ ಕೋರಿ ಪೊಲೀಸ್ ಆಯುಕ್ತರ ಕಚೇರಿ ರಾಜ್ಯ ಗೃಹ ಇಲಾಖೆ ಮತ್ತು ಸಾಮಾನ್ಯ ಆಡಳಿತ ಇಲಾಖೆಗೆ (ಜಿಎಡಿ) ಪತ್ರ ಬರೆದಿದೆ.

