Site icon ಸುದ್ದಿ ಸಂಗ್ರಹ

ಮುಷ್ಕರದಿಂದ ಹಿಂದೆ ಸರಿದ ವೈದ್ಯರು: ನಾಳೆಯಿಂದ ಎಂದಿನಂತೆ ಓಪಿಡಿ ಓಪನ್

ಸುದ್ದಿ ಸಂಗ್ರಹ ಬೆಂಗಳೂರು
ಸರ್ಕಾರಿ ಆಸ್ಪತ್ರೆ ಓಪಿಡಿ ಮುಷ್ಕರದಿಂದ ವೈದ್ಯರು ಹಿಂದೆ ಸರಿದಿದ್ದಾರೆ. ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಮತ್ತು ಸರ್ಕಾರದ ನಡುವಿನ ಸಂಧಾನ ಸಭೆ ಯಶಸ್ವಿಯಾಗಿದೆ. ವೈದ್ಯರ ಬಹುತೇಕ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಮುಂದಾಗಿದೆ. ನಾಳೆಯಿಂದ ಎಂದಿನಂತೆ ಓಪಿಡಿ ಕಾರ್ಯ ನಿರ್ವಹಿಸಲಿವೆ.

ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ನಾಳೆಯಿಂದ ಮುಷ್ಕರಕ್ಕೆ ಕರೆ ನೀಡಿತ್ತು. ಮುಷ್ಕರದ ಎಚ್ಚರಿಕೆಯಿಂದ ಎಚ್ಚೆತ್ತ ಸರ್ಕಾರ ಇಂದು ವೈದ್ಯಾಧಿಕಾರಿಗಳ ಸಂಘದ ಜೊತೆ ಸಭೆ ನಡೆಸಿತು. ಸಚಿವ ಮಹಾದೇವಪ್ಪ ಮತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಭೆ ಮಾಡಿದರು. ವೈದ್ಯರ ಬೇಡಿಕೆಗಳನ್ನು ಆಲಿಸಿದ ಸಚಿವರು ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ. ಬೇಡಿಕೆಗಳ ಈಡೇರಿಕೆ ಭರವಸೆ ಸಿಕ್ಕ ಹಿನ್ನೆಲೆ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಮುಷ್ಕರದಿಂದ ಹಿಂದೆ ಸರಿದಿದೆ.

ಸುಮಾರು 15 ಬೇಡಿಕೆಗಳ ಈಡೇರಿಕೆಗೆ ವೈದ್ಯಾಧಿಕಾರಿಗಳ ಸಂಘ ಒತ್ತಾಯ ಮಾಡಿತ್ತು. ಮುಂಬಡ್ತಿ, ವರ್ಗಾವಣೆ, ಜೇಷ್ಠತೆ ಪಟ್ಟಿ, ಔಷಧಿ ಪೂರೈಕೆ, ನೇಮಕಾತಿ ಸೇರಿದಂತೆ ಹಲವು ಬೇಡಿಕೆಗಳನ್ನ ಇಟ್ಟಿದ್ದರು. ಅದರಲ್ಲಿ ಕೆಲವೊಂದು ಬೇಡಿಕೆಗಳ ಬಗ್ಗೆ ಮುಂದಿನ ವಾರದಲ್ಲಿ ಚರ್ಚೆ ಮಾಡುತ್ತೆವೆ. ಇವತ್ತಿನ ಸಭೆ ಯಶಸ್ವಿಯಾಗಿದೆ. ಸಿಎಂಗೆ ನಾನು, ಮಹದೇವಪ್ಪನವರು ಮಾಹಿತಿ ಕೊಟ್ಟಿದ್ದೆವೆ ಎಂದು ಆರೋಗ್ಯ ಸಚಿವರು ತಿಳಿಸಿದರು.

ಒಟ್ಟಾರೆ ವೈದ್ಯರು ಮತ್ತು ಸರ್ಕಾರದ ನಡುವಿನ ಸಂಧಾನ ಸಭೆ ಯಶಸ್ವಿಯಾಗಿದೆ. ನಾಳೆಯಿಂದ ಆರೋಗ್ಯ ಸೇವೆಯಲ್ಲಿ ಯಾವುದೆ ರೀತಿಯ ವ್ಯತ್ಯಯ ಇರುವದಿಲ್ಲ. ಎಂದಿನಂತೆ ಸರ್ಕಾರಿ ಆಸ್ಪತ್ರೆ ಓಪಿಡಿಗಳು ಕಾರ್ಯ ನಿರ್ವಹಿಸಲಿವೆ.

Exit mobile version