Site icon ಸುದ್ದಿ ಸಂಗ್ರಹ

30 ರೂ ಟೀ ಕುಡಿಯಲು ಹೋಗಿ 30 ಲಕ್ಷ ಮೌಲ್ಯದ ಬೆಳ್ಳಿ- ಬಂಗಾರದ ಆಭರಣ ಕಳೆದುಕೊಂಡ ಟೆಕ್ಕಿ ದಂಪತಿಗಳು

ಸುದ್ದಿ ಸಂಗ್ರಹ ಬೆಂಗಳೂರು
ಟೀ ಕುಡಿಯಲು ಕೆಫೆಗೆ ಹೋದ ಸಮಯ ನೋಡಿಕೊಂಡು ಮನೆಯಲ್ಲಿದ್ದ ಬೆಳ್ಳಿ, ಬಂಗಾರ ಕದ್ದ ಘಟನೆ ನಡೆದಿದೆ. ಬೆಂಗಳೂರಿನ ಎಚ್‌ಆರ್‌ಬಿಆರ್ ಲೇಔಟ್‌ನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ದಂಪತಿಗಳು ವಾಸವಾಗಿದ್ದರು. ಅವರು ಸಂಜೆ ಟೀ ಕುಡಿಯಲು ಕೆಫೆಗೆ ಹೋದಾಗ, ಮನೆಯ ಬೀಗ ಮುರಿದು ಸುಮಾರು 30 ಲಕ್ಷ ರೂ ಗೂ ಅಧಿಕ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಲಾಗಿದೆ ಎಂದು ವರದಿಯಾಗಿದೆ.

ಘಟನೆಯ ವಿವರ
ಎಚ್‌ಆರ್‌ಬಿಆರ್ ಲೇಔಟ್ 2ನೇ ಬ್ಲಾಕ್‌ನಲ್ಲಿರುವ ಬಾಲಾಜಿ ಜಿ (34) ಎಂಬುವವರ 3ನೇ ಮಹಡಿಯ ಫ್ಲಾಟ್‌ನಲ್ಲಿ ಕಳ್ಳತನ ನಡೆದಿದೆ. ಶನಿವಾರ ಸಂಜೆ 4:30 ರಿಂದ 6:30 ರ ನಡುವೆ ಈ ಕೃತ್ಯ ನಡೆದಿದೆ.

ಸಾಫ್ಟ್‌ವೇರ್ ದಂಪತಿ ಮನೆಗೆ ಬೀಗ ಹಾಕಿ, ಟೀ ಕುಡಿಯೋಣ ಎಂದು ಹತ್ತಿರದ ಕೆಫೆಗೆ ಹೋಗಿದ್ದರು. ಸಂಜೆ 6.30ಕ್ಕೆ ಮನೆಗೆ ಮರಳಿದಾಗ, ಮುಖ್ಯ ಬಾಗಿಲಿನ ಬೀಗ ಮುರಿದಿರುವದು ಗೊತ್ತಾಗಿದೆ. ಒಳಗೆ ಹೋಗಿ ನೋಡಿದಾಗ ಬೆಡ್‌ರೂಮ್‌ನ ಕಪಾಟು ಒಪನ್‌ ಆಗಿತ್ತು, ಅಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿ ಮಾಡಲಾಗಿತ್ತು.

ಸುಮಾರು 250 ಗ್ರಾಂ ಚಿನ್ನದ ಆಭರಣಗಳು, ಪೂಜಾ ಕೋಣೆಯಲ್ಲಿದ್ದ 300 ಗ್ರಾಂ ಬೆಳ್ಳಿಯ ವಸ್ತುಗಳು ಸೇರಿದಂತೆ ಇತರ ಬೆಲೆಬಾಳುವ ವಸ್ತುಗಳು ಕಳ್ಳತನ ಮಾಡಲಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಬಗ್ಗೆ ವಿಷಯ ತಿಳಿದ ಕೂಡಲೆ ಪೊಲೀಸರು, ಬೆರಳಚ್ಚು ತಜ್ಞರು, ವಿಧಿವಿಜ್ಞಾನದ ಜೊತೆಗೆ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷಿಗಳು ಸಂಗ್ರಹಿಸಿದ್ದಾರೆ. ಅಪಾರ್ಟ್‌ಮೆಂಟ್, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಲಾಗಿದೆ. ಅಷ್ಟೆ ಅಲ್ಲದೆ ಕಳ್ಳರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅಂದಹಾಗೆ ಬಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 305 ಮತ್ತು 331 ರ ಅಡಿಯಲ್ಲಿ ದೂರು ದಾಖಲಿಸಲಾಗಿದೆ.

Exit mobile version