Site icon ಸುದ್ದಿ ಸಂಗ್ರಹ

ಗಾಂಜಾ ಆರೋಪಿಗಳನ್ನು ಕರೆತರುತ್ತಿದ್ದ ಸಬ್‌ ಇನ್ಸ್‌ಪೆಕ್ಟರ್‌ಗೆ ಲಾರಿ ಡಿಕ್ಕಿಯಾಗಿ ಸಾವು: ಪ್ರಕರಣದ ಸುತ್ತ ಹಲವು ಅನುಮಾನ

ಬೆಂಗಳೂರು: ಗಾಂಜಾ ಆರೋಪಿಗಳ ಬಂಧನಕ್ಕೆ ತೆರಳಿದಾಗ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸಬ್‌ ಇನ್ಸ್‌ಪೆಕ್ಟರ್‌ ಸಾವನ್ನಪ್ಪಿದ ಘಟನೆ ಚಂದಾಪುರದ ಸೂರ್ಯಸಿಟಿಯಲ್ಲಿ ನಡೆದಿದೆ.

ಮೃತರನ್ನು ತಲಘಟ್ಟಪುರ ಸಬ್‌ ಇನ್ಸ್‌ಪೆಕ್ಟರ್‌ ಮೈಬೂಬ್ ಗುಡ್ಡಳ್ಳಿ ಎಂದು ಗುರುತಿಸಲಾಗಿದೆ. ಜೂ.24 ರಂದು ಗಾಂಜಾ ಪ್ರಕರಣದ ಆರೋಪಿಗಳನ್ನು ಬಂಧಿಸಿ ಕರೆತರುವಾಗ ಈ ಅಪಘಾತ ಸಂಭವಿಸಿದೆ. ಆರೋಪಿಗಳನ್ನು ಅರೆಸ್ಟ್ ಮಾಡಿ ಕಾರಲ್ಲಿ ಕರೆತರುವಾಗ ಸ್ವಲ್ಪ ದೂರ ಬಂದು, ಕಾರಿಂದ ಇಳಿದು ಕಾರಿನ ಹಿಂಭಾಗಕ್ಕೆ ಹೋಗಿ ಫೋನ್‌ನಲ್ಲಿ ಮಾತಾಡುವಾಗ, ಸಬ್ ಇನ್ಸ್‌ಪೆಕ್ಟರ್‌ಗೆ ಸೇರಿ ಕಾರಿಗೆ ಡಿಕ್ಕಿಯಾಗಿದೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಲಾರಿ ಚಾಲಕ ಅಪಘಾತದ ಬಳಿಕ ಲಾರಿ ಸಮೇತ ಪರಾರಿಯಾಗಿದ್ದಾನೆ.

ಘಟನೆ ನಡೆದು ಮೂರು ದಿನವಾದರೂ, ಲಾರಿ ಚಾಲಕನನ್ನು ಪೊಲೀಸರು ಬಂಧಿಸಿಲ್ಲ. ಸಬ್‌ ಇನ್ಸ್‌ಪೆಕ್ಟರ್ ಸಾವಿನ ಹಿಂದೆ ಅನುಮಾನಗಳು ಹುಟ್ಟಿಕೊಳ್ಳುತ್ತಿವೆ.

ಗಾರ್ವೆ ಬಾವಿ ಪಾಳ್ಯದಲ್ಲಿ ಸಬ್‌ ಇನ್ಸ್‌ಪೆಕ್ಟರ್ ಕುಟುಂಬಕ್ಕೆ ಸೇರಿದ ನಾಲ್ಕು ಎಕರೆ ಜಮೀನಿನ ವ್ಯಾಜ್ಯವಿದ್ದು, ಲಾರಿ ಬೇಕಂತಲೇ ಗುದ್ದಿಸಿ ಸಾಯಿಸಿರುವ ಅನುಮಾನ ಇದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಅಪಘಾತದ ವೇಳೆ ಕಾರಿನಲ್ಲಿದ್ದ ನಾಲ್ವರು ಆರೋಪಿಗಳಲ್ಲಿ ಇಬ್ಬರು ಎಸ್ಕೇಪ್ ಆಗಿದ್ದಾರೆ. ಪೊಲೀಸ್‌ ಪೇದೆಗಳಿಗೆ ಯಾವುದೆ ಗಾಯಗಳಾಗಿಲ್ಲದೆ ಪಾರಾಗಿದ್ದಾರೆ.

Exit mobile version