ವಾಡಿ: ಪಟ್ಟಣದ ವಾರ್ಡ್ ನಂ.15ರ ಮರಾಠಿ ಗಲ್ಲಿಯ ಸತೀಶ್ ಪಂಗಡವಾಲ ಅವರ ಹಸು ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಸಾವಿಗೀಡಾಗಿದೆ.
ಮನೆಯ ಮುಂಭಾಗದಲ್ಲಿ ಕಟ್ಟಿದ್ದ ಹಸು ಮಳೆಯಿಂದ ತೀವ್ರ ಅಸ್ವಸ್ಥತಗೊಂಡಿತ್ತು. ತಕ್ಷಣ ಪಶು ವೈದ್ಯಾಧಿಕಾರಿಗೆ ಫೋನ್ ಮೂಲಕ ಸಂಪರ್ಕಿಸಿದಾಗ ಅವರು ಹೇಳಿದಂತೆ ಪ್ರಥಮ ಚಿಕಿತ್ಸೆಗೆ ಮುಂದಾಗುವ ಹೊತ್ತಿಗೆ ಹಸು ಸಾವನ್ನಪ್ಪಿದೆ.
ಕಳೆದ ಒಂದು ವರ್ಷದ ಹಿಂದೆ ಈ ಹಸುವನ್ನು ಕುಟುಂಬದ ಉಪಜೀವನ ನಿರ್ವಹಿಸಲು 80 ಸಾವಿರ ಸಾಲ ಮಾಡಿ ಖರೀದಿಸಿದ್ದರು, ಈಗ ಸಂಭವಿಸಿದ ಈ ಅನಾಹುತದಿಂದ ದಿಕ್ಕೆ ತೋಚದಂತಾಗಿದೆ ಎಂದು ಸತೀಶ ಪಂಗಡಿವಾಲ ಮತ್ತು ಕುಟುಂಬಸ್ಥರು ರೋಧಿಸುತ್ತಾ ಹೇಳಿದರು.
ಹಾಲು ಮಾರಿ ಕುಟುಂಬ ನಿರ್ವಹಿಸುತ್ತಿರುವ ಬಡ ಕುಟುಂಬಗಳಿಗೆ ಸೂಕ್ತ ಪರಿಹಾರ ಒದಗಿಸಿ, ಹಸು ಎಮ್ಮೆಗಳ ಹೈನುಗಾರಿಕೆಯಿಂದಲೇ ಇಲ್ಲಿ ಸಾಕಷ್ಟು ಬಡ ಕುಟುಂಬಗಳು ಜೀವನ ಸಾಗಿಸುತ್ತಿರುವುದರಿಂದ ಪಟ್ಟಣದಲ್ಲಿ ಪಶು ಆಸ್ಪತ್ರೆ ಕಟ್ಟಡ ನಿರ್ಮಿಸಿ ಖಾಯಂ ಪಶುವೈದ್ಯರನ್ನು ನೇಮಿಸುವಂತೆ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸುತ್ತೆವೆ ಎಂದು ಸ್ಥಳೀಯ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಪಶು ವೈದ್ಯಾಧಿಕಾರಿ ಮರಣೋತ್ತರ ಪರೀಕ್ಷೆ ನಡೆಸಿದರು.
ನಂತರ ಕುಟುಂಬದವರು ಅಂತ್ಯಕ್ರಿಯೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಗೋಪಾಲ ಆಪುಸಖಾನೆ, ಪ್ರಮೋದ್ ದಹಿಹಂಡೆ, ಪ್ರಸಾದ ಗೌಳಿ, ಓಂಕಾರ ಗೌಳಿ, ಅನಿಲ ಪಂಗಡವಾಲ ಸೇರಿದಂತೆ ಅನೇಕರು ಇದ್ದರು.