ಸುದ್ದಿ ಸಂಗ್ರಹ ಚಿತ್ತಾಪುರ
ಗಿಡ-ಮರಗಳು ನೆಡುವುದು, ಅರಣ್ಯನಾಶ ತಡೆಯುವುದು, ಕಾಗದದ ಮಿತ ಬಳಕೆ ಮತ್ತು ಪರಿಸರ ಜಾಗೃತಿ ಮೂಡಿಸುವ ಮೂಲಕ ಪ್ರತಿಯೊಬ್ಬ ನಾಗರಿಕನು ಅರಣ್ಯ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಬಹುದು ಎಂದು ಉಪವಲಯ ಅರಣ್ಯ ಅಧಿಕಾರಿ ಜಟ್ಟೆಪ್ಪ ನಾವಿ ಹೇಳಿದರು.
ಸಮೀಪದ ಮಾಡಬೂಳ ಗ್ರಾಮದ ಪ್ರಾದೇಶಿಕ ಅರಣ್ಯ ವಲಯದ ಸಸ್ಯಕ್ಷೇತ್ರದಲ್ಲಿ ಪ್ರಾದೇಶಿಕ ಅರಣ್ಯ ವಲಯ ಮತ್ತು ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ಸಂಯುಕ್ತಾಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ “ಅಂತಾರಾಷ್ಟ್ರೀಯ ಅರಣ್ಯ ದಿನಾಚರಣೆ” ಉದ್ಘಾಟಿಸಿ ಮಾತನಾಡಿದ ಅವರು, ಗಿಡ-ಮರಗಳು ಪರಿಸರ ಸಮತೋಲನ, ಶುದ್ಧ ಗಾಳಿ ಮತ್ತು ಜಲಚರಗಳ ಉಳಿವಿಗೆ ಅತ್ಯಗತ್ಯವಾಗಿದೆ ಎಂದರು.
ಉಪನ್ಯಾಸಕ, ಸಮಾಜ ಸೇವಕ ಎಚ್.ಬಿ ಪಾಟೀಲ ಮಾತನಾಡಿ, ಅರಣ್ಯ ಸಂಪತ್ತನ್ನು ಉಳಿಸಿ ಮುಂದಿನ ಪೀಳಿಗೆಗೆ ಹಸಿರು ಭೂಮಿ ಕೊಡುಗೆಯಾಗಿ ನೀಡಬೇಕಾಗಿದೆ. ನಮ್ಮ ದೇಶದ ಒಟ್ಟು ಅರಣ್ಯ ಪ್ರಮಾಣ ಶೇ.21.76 ರಷ್ಟಿದ್ದು, ಇದು ಕನಿಷ್ಠ ಪ್ರಮಾಣ ಶೇ.33ರಷ್ಟಾಗಬೇಕು. ಅದಕ್ಕಾಗಿ ಎಲ್ಲೆಡೆ ಗಿಡ-ಮರಗಳನ್ನು ನೆಟ್ಟು, ಸಂರಕ್ಷಣೆ ಮಾಡಬೇಕು. ಹಸಿರೆ ಉಸಿರು ಎಂಬುದು ಮರೆಯಬಾರದು ಎಂದರು.
ಕಾರ್ಯಕ್ರಮದಲ್ಲಿ ಬಳಗದ ಸದಸ್ಯ ಮಹಾದೇವಪ್ಪ ಎಚ್.ಬಿರಾದಾರ, ಅರಣ್ಯ ವೀಕ್ಷಕರಾದ ರಾಮು ರಾಠೋಡ, ಶರಣಪ್ಪ ರಾಠೋಡ, ಪ್ರಮುಖರಾದ ಶರಣಮ್ಮ, ಅನಿತಾ, ರಾಮು ಪವಾರ, ವಿಶಾಲ, ನಿಕಿತಾ, ಸೋನು ಸೇರಿದಂತೆ ಅನೇಕರು ಭಾಗವಹಿಸಿದ್ದರು.

