ಸುದ್ದಿ ಸಂಗ್ರಹ ಶಹಾಬಾದ್
ಉತ್ತಮ ಫಲಿತಾಂಶ ಬರಲು ಶಾಲೆಯ ಶಿಕ್ಷಕರ ಪರಿಶ್ರಮ ಅಷ್ಟೆ ಮುಖ್ಯ ಎಂದು ರಾವೂರ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು.
ಸಮೀಪದ ರಾವೂರ ಸಂಸ್ಥೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಬೀಳ್ಕೊಡುಗೆ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ಶಿಕ್ಷಣವೆಂದರೆ ಮಗುವಿನ ಸರ್ವಾಂಗಿಣ ವಿಕಾಸವಾಗಿದೆ. ಆದರೆ ಪ್ರಸ್ತುತ ದಿನಗಳಲ್ಲಿ ಶಿಕ್ಷಣ ಸಂಸ್ಥೆಗಳು ಬರಿ ಫಲಿತಾಂಶದ ದೃಷ್ಟಿಯಲ್ಲಿ ಮಕ್ಕಳನ್ನು ಸೀಮಿತಗೊಳಿಸಿದ್ದಾರೆ. ಇಂತಹ ಮಕ್ಕಳು ಸಮಾಜದಲ್ಲಿ ಸಾಮಾಜಿಕರಣ ಆಗುವುದು ಕಷ್ಟ. ದೈಹಿಕ, ಮಾನಸಿಕ, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳು ಮಾತ್ರ ಮಕ್ಕಳನ್ನು ವಿವಿಧ ಆಯಾಮಗಳಲ್ಲಿ ಕ್ರಿಯಾಶೀಲತೆ ಮತ್ತು ಸೃಜನಶಿಲತೆ ಹುಟ್ಟು ಹಾಕಲು ಸಾಧ್ಯ. ಆದ್ದರಿಂದ ಎಲ್ಲಾ ಶಿಕ್ಷಕರು ಮಕ್ಕಳನ್ನು ಬರಿ ಪಠ್ಯಕ್ಕೆ ಮಾತ್ರ ಸೀಮಿತ ಮಾಡದೆ, ಬದುಕಿನ ಸಮಸ್ಯೆ ಸಮರ್ಥವಾಗಿ ಎದುರಿಸುವಂತೆ ಸಜ್ಜುಗೋಳಿಸಿ ಎಂದರು.
ಶಿಕ್ಷಕ ಸಿದ್ದಲಿಂಗ ಬಾಳಿ ಮಾತನಾಡಿ, ಅತಿಯಾದ ಒತ್ತಡದಿಂದ ಪರೀಕ್ಷೆಯ ಬಗ್ಗೆ ಭಯ ಉಂಟು ಮಾಡುತ್ತದೆ, ಹೀಗಾಗಿ ನಿರಂತರ ಅಭ್ಯಾಸ, ಉತ್ತಮ ಹವ್ಯಾಸಗಳು, ಕಠಿಣ ಪರಿಶ್ರಮದಿಂದ ಉತ್ತಮ ಫಲಿತಾಂಶದ ಕಡೆ ಕರೆದುಕೊಂಡು ಹೋಗುತ್ತದೆ ಎಂದರು.
ಶಿಕ್ಷಕ ರವಿ ಕಣೆಕರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಈ ವರ್ಷದ ವಿದ್ಯಾರ್ಥಿ, ವಿದ್ಯಾರ್ಥಿನಿ ಪ್ರಶಸ್ತಿಗೆ ಕಾರ್ತಿಕ್ ಮತ್ತು ಅಂಬಿಕಾ ಭಾಜನರಾದರು. ಉತ್ತಮ ಹಾಜರಾತಿ ಹೊಂದಿದ ಅಕ್ಷತಾ, ಭಾಗ್ಯಶ್ರೀ ಮತ್ತು ಸ್ಪಂದನಾರನ್ನು ಸತ್ಕರಿಸಲಾಯಿತು.
ವೇದಿಕೆಯ ಮೇಲೆ ವಿಎಸ್ಎಸ್ಎನ್ ಅಧ್ಯಕ್ಷ ಶಿವಕುಮಾರ್ ಆಳ್ಳೊಳ್ಳಿ, ಸಂಸ್ಥೆಯ ಸದಸ್ಯರಾದ ಸಿದ್ದಲಿಂಗ ಜ್ಯೋತಿ, ಜಾಕೀರ ಹುಸೇನ್ ಫತ್ತೆಖಾನ್, ಮುಖ್ಯಗುರು ವಿದ್ಯಾಧರ ಖಂಡಳ, ಪ್ರಮುಖರಾದ ರವಿ ಅಲ್ಲಮಶೆಟ್ಟಿ ಇದ್ದರು.
ವಿದ್ಯಾರ್ಥಿನಿ ಹರ್ಷಿಯಾ ನಿರೂಪಿಸಿದಳು, ರಶ್ಮಿತಾ, ಭಾಗ್ಯಶ್ರೀ ಪ್ರಾರ್ಥಿಸಿದರು ಮತ್ತು ವಿದ್ಯಾ ವಂದಿಸಿದಳು.

