ಸುದ್ದಿ ಸಂಗ್ರಹ ಕಲಬುರಗಿ
ಮೆದುಳಿನ ಅಸಹಜ ಚಟುವಟಿಕೆಯಿಂದ ಮೂರ್ಛೆ ರೋಗ ಬರುತ್ತದೆ. ಪ್ರಜ್ಞಾರಹಿತ ಕೈಕಾಲುಗಳ ಸೆಳೆತ, ತಲೆತಿರುಗುವಿಕೆ ಮತ್ತು ಕಣ್ಣು ಗುಡ್ಡೆ ಮೇಲ್ಮುಖವಾಗಿ ತಿರುಗುವ ಲಕ್ಷಣ ಕಂಡುಬಂದರೆ ತಜ್ಞ ವೈದ್ಯರಿಗೆ ಭೇಟಿಯಾಗಿ ತಪಾಸಣೆ ನಡೆಸಿ, ಚಿಕಿತ್ಸೆ ಪಡೆಯಬೇಕು. ಇದರ ಬಗ್ಗೆ ಎಚ್ಚರ ವಹಿಸುವುದು ಅಗತ್ಯ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್ ಕೇಶ್ವಾರ ಹೇಳಿದರು.
ನಗರದ ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ “ವಿಶ್ವ ಮೂರ್ಛೆ ರೋಗ ಜಾಗೃತಿ ದಿನಾಚರಣೆ”ಯಲ್ಲಿ ಮಾತನಾಡಿದ ಅವರು, ಸೂಕ್ತ ಆಹಾರ, ವಿಹಾರ, ಸಾಕಷ್ಟು ನಿದ್ರೆ, ಒತ್ತಡ ನಿರ್ವಹಣೆ ಮತ್ತು ಅಪಘಾತಗಳಿಂದ ರಕ್ಷಿಸಿಕೊಳ್ಳುವುದು ಮುಖ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಎಚ್.ಬಿ ಪಾಟೀಲ್, ಸಿಬ್ಬಂದಿ ಜಗನಾಥ ಗುತ್ತೇದಾರ, ಶ್ರೀದೇವಿ, ರೇಷ್ಮಾ ನಕ್ಕುಂದಿ, ಮಂಗಲಾ ಚಂದಾಪುರೆ, ನಾಗೇಶ್ವರಿ ಮುಗಳಿವಾಡಿ, ಅನಿತಾ, ಚಂದಮ್ಮ ಸೇರಿದಂತೆ ಆಶಾ ಕಾರ್ಯಕರ್ತೆಯರು, ಬಡಾವಣೆಯ ನಾಗರಿಕರು ಇದ್ದರು.

