Site icon ಸುದ್ದಿ ಸಂಗ್ರಹ

ಸಿದ್ದಲಿಂಗ ಮಹಾಸ್ವಾಮಿಗಳ ಜನ್ಮದಿನದ ಪ್ರಯುಕ್ತ ಉಚಿತ ಕ್ಷೌರ ಸೇವೆ

ಚಿತ್ತಾಪುರ: ಸಮೀಪದ ರಾವೂರ ಗ್ರಾಮದ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳ 33ನೇ ಜನ್ಮದಿನದ ಪ್ರಯುಕ್ತ ರಾವೂರನ ಬಾಳಿ ಕಾಂಪ್ಲೆಕ್ಸ್’ನಲ್ಲಿನ ಗುರು ಮೆನ್ಸ್ ಪಾರ್ಲರ್ ವತಿಯಿಂದ ಉಚಿತ ಕ್ಷೌರ ಸೇವೆ ಮಾಡಲಾಯಿತು.

ಎರಡು ವರ್ಷಗಳಿಂದ ತಮ್ಮ ವೃತ್ತಿಯಲ್ಲಿ ದುಡಿಯುತ್ತಾ ಪೂಜ್ಯರ ಜನ್ಮದಿನದ ಪ್ರಯುಕ್ತ ಎರಡನೇ ವರ್ಷ ಒಂದು ದಿನ ಸಾರ್ವಜನಿಕರಿಗೆ ಉಚಿತ ಕ್ಷೌರ ಸೇವೆ ಮಾಡುವ ಸಂಕಲ್ಪದೊಂದಿಗೆ ಮಹಾದೇವ ವಡಗೇರಿ, ಅಂಬರೀಷ್ ವಡಗೇರಿ, ಶರಣು ವಡಗೇರಿ, ಭಾಗಣ್ಣ ವಡಗೇರಿ ಮತ್ತು ಗಂಗಾಧರ ವಡಗೇರಿಯವರು ಇಂತಹ ಸತ್ಕಾರ್ಯ ಮಾಡಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. 100ಕ್ಕೂ ಹೆಚ್ಚು ಜನರು ಇದರ ಲಾಭ ಪಡೆದುಕೊಂಡರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಿದ್ದಲಿಂಗ ಬಾಳಿ, ಪೂಜ್ಯರ ಜನ್ಮದಿನ ಅರ್ಥಪೂರ್ಣವಾಗಿಸಲು ಮಾಡುತ್ತಿರುವ ಇಂತಹ ಸೇವೆ ನಿಜಕ್ಕೂ ಸಾರ್ಥಕವಾದದ್ದು. ಇದೊಂದು ಮಾದರಿ ಕಾರ್ಯವಾಗಿದೆ. ಅಷ್ಟೆ ಅಲ್ಲದೆ ಸಮಾಜದಲ್ಲಿ ತಮ್ಮದೆಯಾದ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕರಿಗೂ ಸನ್ಮಾನಿಸಿ ಗೌರವಿಸಿದ್ದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಅಣ್ಣಾರಾವ ಬಾಳಿ, ದೇವಿoದ್ರಪ್ಪ ರದ್ದೆವಾಡಗಿ, ಸೋಮಶೇಖರ ಮಠಪತಿ, ಮಹೇಶ್ ಬಾಳಿ, ಭೀಮರಾವ ಪಾಟೀಲ, ಶಾಂತು ಬಾಳಿ, ಗುರುರಾಜ ವೈಷ್ಣವ, ಸಂಗಮೇಶ ಪೂಜಾರಿ, ಅಶೋಕ ವಗ್ಗರ, ಮಲ್ಲು ಮುತ್ತಗಿ, ಅಂಬರೀಷ್ ಸಾಂಗ್ಲಿಯಾನ, ಶಿವಲಿಂಗ ಯಳಮೇಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Exit mobile version